ಮನೆ ರಾಜ್ಯ ಮೈಸೂರು: ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಜನವರಿಯಲ್ಲಿ ಟೆಂಡರ್- ಪ್ರತಾಪ್ ಸಿಂಹ

ಮೈಸೂರು: ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಜನವರಿಯಲ್ಲಿ ಟೆಂಡರ್- ಪ್ರತಾಪ್ ಸಿಂಹ

0

ಮೈಸೂರು(Mysuru): ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲಾಗುತ್ತಿದ್ದು, 2023ರ ಜನವರಿ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಫೆರಿಫೆರಲ್ ವರ್ತುಲ ರಸ್ತೆ ನಿರ್ಮಿಸುವ ಬಗ್ಗೆ ಹಿಂದಿನಿಂದಲೂ ಪ್ರಸ್ತಾಪಗಳಾಗಿವೆ, ಚರ್ಚೆಯೂ ಆಗಿದೆ. ಆದರೆ, ಯಾವುದೇ ಸ್ಪಷ್ಟ ನಿರ್ಧಾರ ಆಗಿರಲಿಲ್ಲ. ನಾವು 6 ತಿಂಗಳಿಂದೀಚೆಗೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಜೂನ್‌ 5ರಂದು ಇಲ್ಲಿಗೆ ಬಂದಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಡಾದ ಆಗಿನ ಅಧ್ಯಕ್ಷ ಎಚ್‌.ವಿ.ರಾಜೀವ್, ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ಭೇಟಿಯಾಗಿ ಅನುದಾನ ಕೇಳಿದ್ದೆವು. ಅನುದಾನ ಒದಗಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಡಿಪಿಆರ್‌ ತಯಾರಿಸುವಾಗ, ಆರೋಗ್ಯ ಕ್ಷೇತ್ರ, ಶಿಕ್ಷಣ, ಕೈಗಾರಿಕೆ ಮೊದಲಾದವುಗಳಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಕ್ಲಸ್ಟರ್‌’ಗಳನ್ನು ಮಾಡುವಂತೆಯೂ ಸೂಚಿಸಿದ್ದಾರೆ. ಅದರಂತೆ ಡಿಪಿಆರ್‌ ವಿನ್ಯಾಸಗೊಳಿಸಲಾಗುತ್ತಿದೆ. ಇದಕ್ಕೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಯೋಜನಾ ನಿರ್ದೇಶಕ ಶ್ರೀಧರ್ ಅವರ ಸಹಕಾರವನ್ನೂ ಮುಡಾ ಅಧಿಕಾರಿಗಳಿಗೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಸ್ತೆಯು ಈಗಿರುವ ವರ್ತುಲ ರಸ್ತೆಯಿಂದ ಸರಾಸರಿ 5ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗಬಹುದು. ಅದು ಜಾಗದ ಲಭ್ಯತೆಯನ್ನು ಆಧರಿಸಿರಲಿದೆ. ಒಟ್ಟು 102 ಕಿ.ಮೀ. ರಸ್ತೆ ಇರಲಿದೆ. ರಸ್ತೆಗಾಗಿ ಭೂಸ್ವಾಧೀನಕ್ಕಾಗಿ ಹಳ್ಳಿಗಳನ್ನು ಒಕ್ಕಲೆಬ್ಬಿಸಲು ಹೋದರೆ ಜನರು ವಿರೋಧ ಮಾಡುತ್ತಾರೆ. ಊರಿನ ಬಗ್ಗೆ ಜನರಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಅದಕ್ಕೆ ಧಕ್ಕೆ ಮಾಡಲಾಗದು. ಆದ್ದರಿಂದ ಹೊಲ– ಗದ್ದೆಗಳಲ್ಲೇ (ಗ್ರೀನ್ ಫೀಲ್ಡ್‌) ಜಾಗ ಪಡೆಯಬೇಕಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ವರ್ತುಲ ರಸ್ತೆಯಲ್ಲಿ ಅಲ್ಲಲ್ಲಿ ಅಪಘಾತ ವಲಯಗಳು ನಿರ್ಮಾಣವಾಗಿದೆ. ಇದಿಲ್ಲದಂತೆ ಈ ಹೊಸ ರಸ್ತೆ ನಿರ್ಮಿಸಬೇಕಾಗುತ್ತದೆ. ಕೆಳಸೇತುವೆ, ಮೇಲ್ಸೇತುವೆ ಕಟ್ಟಬೇಕಾದ ಅಗತ್ಯ ಬರಬಾರದು. ಕೈಗಾರಿಕೆ ಅಭಿವೃದ್ಧಿಗೂ ಪೂರಕವಾಗಿರುವಂತೆ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಮೈಸೂರಿನ ಭವಿಷ್ಯದ ದೃಷ್ಟಿಯಿಂದ ಇದು ಬಹಳ ಮಹತ್ವದ್ದಾಗಿದೆ. ಇಲ್ಲದಿದ್ದರೆ ನಗರವು ಮತ್ತೊಂದು ಬೆಂಗಳೂರು ಆಗಿಬಿಡುತ್ತದೆ. ಈಗಲೇ 40ರಿಂದ 50 ಎಕರೆ ಜಮೀನು ಕಾಯ್ದಿರಿಸಿ ಟೌನ್‌ಶಿಪ್ ನಿರ್ಮಾಣಕ್ಕೂ ಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪೆರಿಫೆರಲ್ ವರ್ತುಲ ರಸ್ತೆ ಅಕ್ಕಪಕ್ಕದಲ್ಲಿ ಕ್ಲಸ್ಟರ್‌ಗಳನ್ನು ಮಾಡಿದರೆ ಮುಡಾಕ್ಕೆ ವರಮಾನವೂ ಬರುತ್ತದೆ. ಇದೆಲ್ಲವನ್ನೂ ಒಳಗೊಂಡು ಲೋಪದೋಷಗಳು ಇಲ್ಲದಿರುವಂತಹ ಡಿಪಿಆರ್‌ ಅನ್ನು ತಯಾರಿಸಿ, ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿವರಿಸಿದರು.

ಎರಡು ವರ್ಷಗಳಲ್ಲಿ ಕಾಮಗಾರಿ ಆರಂಭಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಮುಡಾ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಎಷ್ಟು ಮೊತ್ತ ಬೇಕಾಗುತ್ತದೆ ಎನ್ನುವುದು ಡಿಪಿಆರ್‌ ಸಿದ್ಧಗೊಂಡ ನಂತರ ತಿಳಿಯಲಿದೆ ಎಂದರು.

ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಎಸ್‌ಇ ಚನ್ನಕೇಶವ, ನಗರ ಯೋಜಕ ಸದಸ್ಯ ಆರ್.ಶೇಷ, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಯೋಜನಾ ನಿರ್ದೇಶಕ ಶ್ರೀಧರ್ ಇದ್ದರು.