ಮನೆ ರಾಜಕೀಯ ಪ್ರತಿ ಚುನಾವಣೆಯಲ್ಲೂ ಕ್ಷೇತ್ರ ಹುಡುಕಾಡುವ ವ್ಯಕ್ತಿ ಮಾತಿಗೆ ಮನ್ನಣೆ ಕೊಡುವ ಅಗತ್ಯವಿಲ್ಲ: ಪ್ರತಾಪ್ ಸಿಂಹ

ಪ್ರತಿ ಚುನಾವಣೆಯಲ್ಲೂ ಕ್ಷೇತ್ರ ಹುಡುಕಾಡುವ ವ್ಯಕ್ತಿ ಮಾತಿಗೆ ಮನ್ನಣೆ ಕೊಡುವ ಅಗತ್ಯವಿಲ್ಲ: ಪ್ರತಾಪ್ ಸಿಂಹ

0

ಮೈಸೂರು(Mysuru): ಪ್ರತಿ ಚುನಾವಣೆಯಲ್ಲೂ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಡುವ ವ್ಯಕ್ತಿಯ ಮಾತಿಗೆ ಹೆಚ್ಚಿನ ಮನ್ನಣೆ ಕೊಡುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಯಾವುದೇ ಪ್ರಚಾರ ಮಾಡದಿದ್ದರೂ ಕುಳಿತುಕೊಂಡೇ ಗೆಲ್ಲುತ್ತೇವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣದಿಂದ ಚಾಮುಂಡೇಶ್ವರಿಗೆ ನೆಗೆದು ಸೋತ ಸಿದ್ದರಾಮಯ್ಯ, ಬಾದಾಮಿಯಲ್ಲಿ ಸಣ್ಣ ಅಂತರದಿಂದ ಗೆದ್ದರು. ಮುಂದಿನ ಚುನಾವಣೆಯಲ್ಲಿ ಕೋಲಾರಕ್ಕೆ ಹೋಗಲೋ, ವರುಣಕ್ಕೆ ಹೋಗಲೋ ಎನ್ನುತ್ತಿರುವ ಸಿದ್ದರಾಮಯ್ಯ ವರುಣ ಕ್ಷೇತ್ರದ ಸಣ್ಣ ಸಣ್ಣ ಹಳ್ಳಿಗಳಿಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುತ್ತೇವೆ ಎನ್ನುತ್ತಿರುವವರಿಗೆ ಕ್ಷೇತ್ರ ಹುಡುಕಾಡುವ ದೈನೇಸಿ ಸ್ಥಿತಿ ಏಕೆ ಬಂತು? ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ. ಒಂದು ಚೇರ್ ನಿಂದ ಇನ್ನೊಂದು ಚೇರ್ ಗೆ ಹೋಗಿ ಕೂರಲು ಇದೇನು ಮ್ಯೂಸಿಕಲ್ ಚೇರ್ ಆಟವಲ್ಲ ಎಂದು ವ್ಯಂಗ್ಯವಾಡಿದರು.

ವರುಣ ಬಿಟ್ಟು ಬೇರೆಲ್ಲಿಂದಾದರೂ ಸ್ಪರ್ಧಿಸಲಿ, ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧಿಸಿ ಗೆಲ್ಲಲಿ ಎಂದರು.