ಮನೆ ರಾಷ್ಟ್ರೀಯ ಸಂಸತ್‌’ನಲ್ಲಿ ಭಾರತ-ಚೀನಾ ಗಡಿ ಘರ್ಷಣೆ ಚರ್ಚೆಗೆ ವಿಪಕ್ಷಗಳ ಆಗ್ರಹ

ಸಂಸತ್‌’ನಲ್ಲಿ ಭಾರತ-ಚೀನಾ ಗಡಿ ಘರ್ಷಣೆ ಚರ್ಚೆಗೆ ವಿಪಕ್ಷಗಳ ಆಗ್ರಹ

0

ಹೊಸ ದಿಲ್ಲಿ(Newdelhi): ಭಾರತ ಮತ್ತು ಚೀನಾ ಗಡಿಯ ತವಾಂಗ್ ವಲಯದಲ್ಲಿ ಸಂಭವಿಸಿದ ಉಭಯ ದೇಶಗಳ ಸೈನಿಕರ ನಡುವಣ ಘರ್ಷಣೆ ವಿಚಾರ ಇದೀಗ ಸಂಸತ್‌’ನಲ್ಲೂ ಪ್ರತಿಧ್ವನಿಸಿದೆ.

ಅರುಣಾಚಲ ಪ್ರದೇಶದಲ್ಲಿ ಇರುವ ತವಾಂಗ್ ಗಡಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಘರ್ಷಣೆ ಪ್ರಕರಣ ಸೋಮವಾರ ಸಂಜೆಯಷ್ಟೇ ಬೆಳಕಿಗೆ ಬಂದಿತ್ತು. ಭಾರತ ಮತ್ತು ಚೀನಾ ಗಡಿಯ ಎಲ್‌ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಈ ಘರ್ಷಣೆ ಸಂಭವಿಸಿತ್ತು. ಈ ಕುರಿತಾಗಿ ಸಂಸತ್‌’ನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದಾರೆ.

ಈ ಸಂಬಂಧ ಚರ್ಚೆಗೆ ಅನುಮತಿ ನೀಡುವಂತೆ ರಾಜ್ಯಸಭೆಗೆ ಹಾಗೂ ಲೋಕಸಭೆಗೆ ಕಾಂಗ್ರೆಸ್ ಸಂಸದರು ನಿಲುವಳಿ ಸೂಚನೆ ನೀಡಿದ್ದಾರೆ.

ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿದ ವರದಿಗಳು ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನುಂಟು ಮಾಡುತ್ತಿವೆ. ಈ ಬಗ್ಗೆ ಸದನ ಹಾಗೂ ದೇಶದ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಇದಕ್ಕಾಗಿ ದಿನದ ಮಟ್ಟಿಗೆ ಸದನದ ಉಳಿದೆಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು ಎಂದಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರಧಾನ ಮಂತ್ರಿಯವರು ಮತ್ತು ರಕ್ಷಣಾ ಸಚಿವರು, 2020ರ ಏಪ್ರಿಲ್‌’ನಿಂದ ಇಲ್ಲಿವರೆಗೆ ಎಲ್‌’ಎಸಿ ಮೂಲಕ ಭಾರತದ ಭೂ ಪ್ರದೇಶದಲ್ಲಿ ಚೀನಾ ನಡೆಸಿರುವ ಅತಿಕ್ರಮಗಳ ಬಗ್ಗೆ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತ ಮತ್ತು ಚೀನಾ ಪಡೆಗಳ ಸಂಘರ್ಷ ಗಂಭೀರವಾದದ್ದು ಎಂದು ಕಳವಳ ವ್ಯಕ್ತಪಡಿಸಿರುವ ಸಂಸದ ಮನೀಶ್‌ ತಿವಾರಿ, ಇದು ದೇಶದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಒಟ್ಟಾರೆ ಗಡಿಯಲ್ಲಿನ ಪರಿಸ್ಥಿತಿ ಕುರಿತು ಸರ್ಕಾರವು ಮಾಹಿತಿ ನೀಡಬೇಕು. ಈ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು ಎಂದಿದ್ದಾರೆ.

ತವಾಂಗ್‌ ವಲಯದಲ್ಲಿನ ಯಾಂಗ್‌ಟ್ಸೆ ಬಳಿ ಡಿಸೆಂಬರ್ 9ರಂದು ಚೀನಾದ ಸೈನಿಕರು ಎಲ್‌ಎಸಿಯನ್ನು ದಾಟಿ ಬಂದಿದ್ದರು. ಆದರೆ ಅಲ್ಲಿಯೇ ಇದ್ದ ನಮ್ಮ ಸೈನಿಕರು ಇದನ್ನು ಪ್ರತಿಭಟಿಸಿದರು. ಇದರಿಂದ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷ ನಡೆಯಿತು. ಎರಡೂ ಕಡೆಯವರಿಗೆ ಸಣ್ಣ–ಪುಟ್ಟ ಗಾಯಗಳಾದವು ಎಂದು ಸೇನೆಯ ಪ್ರಕಟಣೆಯಲ್ಲಿ ತಿಳಿಸಿತ್ತು.

ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್‌’ನ ಮತ್ತಷ್ಟು ಸಂಸದರು ಒತ್ತಾಯಿಸಿದ್ದಾರೆ.

ಭಾರತ–ಚೀನಾ ಸೇನಾ ಸಂಘರ್ಷದ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ.