ಮನೆ ಅಪರಾಧ ಮೈಸೂರು: ನಿವೇಶನ ಖಾತೆಗೆ ಲಂಚ ಪಡೆಯುತ್ತಿದ್ದ ವಿಶೇಷ ತಹಶೀಲ್ದಾರ್ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ

ಮೈಸೂರು: ನಿವೇಶನ ಖಾತೆಗೆ ಲಂಚ ಪಡೆಯುತ್ತಿದ್ದ ವಿಶೇಷ ತಹಶೀಲ್ದಾರ್ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ

0

ಮೈಸೂರು(Mysuru): ನಿವೇಶನ ಖಾತೆ ಮಾಡಿಕೊಡಲು 14 ಸಾವಿರ ಲಂಚ ಪಡೆದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಸೇರಿದಂತೆ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಶೇಷ ತಹಸೀಲ್ದಾರ್ ಬಿ.ಕೆ.ಶ್ರೀನಿವಾಸ್, ಎಫ್’ಡಿಎ ರಂಗಣ್ಣ, ಅಟೆಂಡರ್ ವರಲಕ್ಷ್ಮಿ ಬಂಧಿತ ಆರೋಪಿಗಳು.

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮೈಸೂರು ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುವಾಗಲೇ ಆರೋಪಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಶ್ರೀರಾಂಪುರ ಬಡಾವಣೆಯ 7 ನಿವೇಶನಗಳಿಗೆ ಖಾತೆ ಮಾಡಿಸಲು ಕಾರ್ತಿಕ್ ಗೌಡ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳಿಂದ ಖಾತೆ ಮಾಡಿಕೊಡದೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದರು. ಖಾತೆ ಮಾಡಿಕೊಡಲು 20 ಸಾವಿರ ಲಂಚಕ್ಕೆ ಬೇಡಿಕೆ ಕೂಡ ಇಟ್ಟಿದ್ದರು. ಇದರಿಂದ ಬೇಸತ್ತ ಕಾರ್ತಿಕ್ ಗೌಡ ಲೋಕಾಯುಕ್ತ ಮೊರೆ ಹೋಗಿದ್ದರು.

ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಇಂದು ಮುಡಾ ಕಚೇರಿಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಕೃಷ್ಣ ಹಾಗೂ ನಿರೀಕ್ಷಕರಾದ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.