ಮನೆ ರಾಜಕೀಯ ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ: ಕಾಂಗ್ರೆಸ್

ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ: ಕಾಂಗ್ರೆಸ್

0

ಬೆಂಗಳೂರು: ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದಿದ್ದಾರೆ ಎನ್ನಲಾಗಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ?. ದೋಸೆ ತಿನ್ನುವ ಚಪಲ ಹೆಚ್ಚಾಗಿ ಎಮರ್ಜೆನ್ಸಿ ಎಕ್ಸಿಟ್ ಆಗಲು ಹೊರಟಿದ್ದಾ? ಎಂದು ಕಾಂಗ್ರೆಸ್ ಪಕ್ಷ ಕುಟುಕಿದೆ.

ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು ? ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ!  ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು? ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟಿಸಿ, ಬಿಜೆಪಿಯ ವಿಐಪಿ ಹುಡುಗನನ್ನು ಯಾವ ಧೈರ್ಯದಲ್ಲಿ ವಿಮಾನ ಸಂಸ್ಥೆ ದೂರುತ್ತಿದೆ?. ಬಿಜೆಪಿಯ ಪ್ರಬಲರಿಗೆ ಇದು ಹೊಸ ನಿಯಮವೇ? ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿದ್ದಾರೆಯಾ? ಬಿಜೆಪಿಯ ಬಲಾಢ್ಯ ವಿಐಪಿಗಳ ಬಗ್ಗೆ ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ಲೇವಡಿ ಮಾಡಿದೆ.

ಏನಿದು ಘಟನೆ?: ಕಳೆದ ಡಿಸೆಂಬರ್‌ 10 ರಂದು ತೇಜಸ್ವಿ ಸೂರ್ಯ ಅವರು ಚೆನ್ನೈನಿಂದ ತಿರುಚಿರಾಪಳ್ಳಿಗೆ ತೆರಳಲು ಅಣಿಯಾಗಿ ನಿಂತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಘಟನೆ ನಡೆದಿದೆ. ಪ್ರಯಾಣಿಕರ ತುರ್ತು ನಿರ್ಗಮನದ ಬಳಿ ಕುಳಿತಿದ್ದ ತೇಜಸ್ವಿ ಸೂರ್ಯ, ಇದ್ದಕ್ಕಿದ್ದಂತೆ ಲಿವರ್ ಎಳೆದು ನಿರ್ಗಮನ ದ್ವಾರ ತೆರೆದಿದ್ದರು ಎಂದು ಹೇಳಲಾಗಿದೆ.

ತಕ್ಷಣ ಪ್ರಯಾಣಿಕರನ್ನೆಲ್ಲ ವಿಮಾನದಿಂದ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌’ಎಫ್) ಸ್ಥಳಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮತ್ತೆ ವಿಮಾನ ಹಾರಾಟ ಆರಂಭಿಸಲು ಕನಿಷ್ಠ ಎರಡು ಗಂಟೆ ಬೇಕಾಯಿತು. ನಿಯಮ ಉಲ್ಲಂಘನೆಗೆ ಕೂಡಲೇ ತೇಜಸ್ವಿ ಸೂರ್ಯ ಕೂಡಲೇ ಕ್ಷಮೆಯಾಚಿಸಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.