ಮನೆ ಅಪರಾಧ ಇಬ್ಬರನ್ನು ಬಲಿ ಪಡೆದಿದ್ದ ಕಾರು ಅಪಘಾತ ಪ್ರಕರಣ: ಯೂ-ಟ್ಯೂಬರ್ ಅರ್ಪಿತ್ ಬಂಧನ

ಇಬ್ಬರನ್ನು ಬಲಿ ಪಡೆದಿದ್ದ ಕಾರು ಅಪಘಾತ ಪ್ರಕರಣ: ಯೂ-ಟ್ಯೂಬರ್ ಅರ್ಪಿತ್ ಬಂಧನ

0

ಮೂಲ್ಕಿ: ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಇಬ್ಬರನ್ನು ಬಲಿ ಪಡೆದ ಕಾರು ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.‌‌

ಆರೋಪಿ ಕಾರು ಚಾಲಕನನ್ನು “ಮ್ಯಾಡ್ ಇನ್ ಕುಡ್ಲ” ಹೆಸರಿನ ಯೂ-ಟ್ಯೂಬರ್ ಹಳೆಯಂಗಡಿ ಇಂದಿರಾನಗರ ನಿವಾಸಿ ಅರ್ಪಿತ್(35) ಎಂದು ಗುರುತಿಸಲಾಗಿದೆ. ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಅಪಘಾತಕ್ಕೆ ಕಾರಣವಾದ ಆರೋಪಿಯ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ:

ಮಧ್ಯಪ್ರದೇಶದಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿಯ ಟೈರ್ ಪಂಕ್ಚರ್ ಆಗಿತ್ತು. ಲಾರಿಯನ್ನು ಪಡುಪಣಂಬೂರು ಬಳಿ ಹೆದ್ದಾರಿ ಬದಿ ನಿಲ್ಲಿಸಿ ಚಾಲಕ ಹಾಗೂ ಸಿಬ್ಬಂದಿ ಅದನ್ನು ದುರಸ್ತಿ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಕಾರು ಚಾಲಕ ಅರ್ಪಿತ್ ಅವರು ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ಹೆದ್ದಾರಿಯ ಎಡಗಡೆಗೆ ರಭಸವಾಗಿ ನುಗ್ಗಿ ಡಿಕ್ಕಿ ಹೊಡೆದಿತ್ತು. ಚಾಲಕ ಅರ್ಪಿತ್ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದರು. ಬಬುಲು (23), ಆಚಲ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದು ಅವರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ಘಟನೆಯಲ್ಲಿ ಕೇರಳ ನಿವಾಸಿ ಅನೀಶ್(42) ಗಂಭೀರ ಗಾಯಗೊಂಡಿದ್ದರು.