ಮನೆ ಅಪರಾಧ ಲಾರಿಗಳ ನಡುವೆ ಅಪಘಾತ: ಓರ್ವ ಸಜೀವ ದಹನ

ಲಾರಿಗಳ ನಡುವೆ ಅಪಘಾತ: ಓರ್ವ ಸಜೀವ ದಹನ

0

ದೇವನಹಳ್ಳಿ: ಸಿಮೆಂಟ್ ತುಂಬಿದ್ದ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ಲಾರಿಗಳು ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಬಳಿಯ ಬುಕ್ತಿ ಡಾಬಾ ಮುಂಭಾಗ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಚಾಲಕ ಲಾರಿಯಿಂದ ಹೊರ ಬರಲಾಗದೇ ಸುಟ್ಟು ಕರಕಲಾದರೆ, ಮತ್ತೊಬ್ಬ ಚಾಲಕ ಅದೃಷ್ಟವಶಾತ್​ ಪಾರಾಗಿದ್ದಾನೆ.

ಮೃತ ಚಾಲಕನನ್ನು ವಸಂತಕುಮಾರ್ (28) ಗುರುತಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಗೊಟ್ಲಾಪಲ್ಲಿಯ ನಿವಾಸಿಯಾದ ಈತ ಆಂಧ್ರ ಮೂಲದ ಜಮ್ಮಲ್ಲಮಡಗುವಿನ ಡಾಲ್ಮಿ ಎಂಬ ಕಂಪನಿಯಲ್ಲಿ ಚಾಲಕನಾಗಿದ್ದ.

ಮತ್ತೊಂದು ಲಾರಿ ಚಾಲಕ ವೇಲು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.ಅಪಘಾತವಾದ ಎರಡು ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಹೊರಟಿದ್ದವು. ಒಂದು ಲಾರಿ ಮೈಸೂರಿಗೆ, ಮತ್ತೊಂದು ಬೆಂಗಳೂರಿನ ವೈಟ್ ಫೀಲ್ಡ್ ಕಡೆ​ಗೆ ಹೋಗುತ್ತಿರುವಾಗ ಚಾಲಕ ವಸಂತಕುಮಾರ್​​ ಎಡ ಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಮುಂದಿನ ಲಾರಿಯು ರಸ್ತೆ ವಿಭಜಕ ದಾಟಿ ಪಲ್ಟಿ ಹೊಡೆದು ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿ ಬಿದ್ದಿದೆ.

ಈ ಸಂದರ್ಭದಲ್ಲಿ ಚಾಲಕ ವೇಲು ಮುಂಬದಿಯ ಗ್ಲಾಸ್ ಒಡೆದುಕೊಂಡು ರಸ್ತೆ ಮೇಲೆ ಬಿದ್ದಿದ್ದು, ಅದನ್ನು ಕಂಡ ತಕ್ಷಣ ಸ್ಥಳದಲ್ಲಿದ್ದ ಜನರು ಆತನನ್ನು ರಕ್ಷಿಸಿದ್ದಾರೆ.ಇತ್ತ ಹಿಂಬದಿಯಿಂದ ಗುದ್ದಿದ ಲಾರಿಯು ನಿಯಂತ್ರಣ ಸಿಗದೇ ಮುಂಬದಿ ಜಖಂಗೊಂಡು ವಿಭಜಕದ ಮೇಲೆ ನಿಂತಿತ್ತು. ಆದರೆ ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳು ಬೆಂಕಿ ಹೊತ್ತಿಕೊಂಡು ಉರಿದಿವೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ. ಘಟನೆ ಬಗ್ಗೆ ವಿಜಯಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.