ಮನೆ ಅಪರಾಧ ಚಲಿಸುತ್ತಿದ್ದ ಕಾರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಮುಖ ಆರೋಪಿ ಬಂಧನ

ಚಲಿಸುತ್ತಿದ್ದ ಕಾರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಮುಖ ಆರೋಪಿ ಬಂಧನ

0

ಅಗರ್ತಲಾ: ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಪೂರ್ವ ತ್ರಿಪುರಾ ಜಿಲ್ಲೆಯ ಅಮತಾಲಿ ಬೈಪಾಸ್ ರಸ್ತೆಯಲ್ಲಿ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ನಡೆದಿದೆ.

Join Our Whatsapp Group

ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯನ್ನು ಇಲ್ಲಿನ ಜಿ.ಬಿ. ಪಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಮುಖ ಆರೋಪಿ ಗೌತಮ್ ಶರ್ಮಾ ಎಂಬಾತನನ್ನು ಬಂಧಿಸಿ, ಬುಧವಾರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಆಶಿಶ್ ದಾಸ್ ಗುಪ್ತ, ವಿದ್ಯಾರ್ಥಿನಿಯು ಪ್ರಮುಖ ಆರೋಪಿಯೊಂದಿಗೆ ಸೋಮವಾರ ವಾಹನದಲ್ಲಿ ಸಂಚರಿಸಿರುವುದು ಕಂಡುಬಂದಿದೆ. ರಾತ್ರಿಯಾಗುತ್ತಿದ್ದಂತೆ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡ ಆರೋಪಿ, ಆಕೆಯ ವಿರೋಧದ ನಡುವೆಯೂ ಲೈಂಗಿಕ ದೌರ್ಜನ್ಯವೆಸಗಿ, ಅಮತಾಲಿ ಬೈಪಾಸ್ ಸಮೀಪ ಬಿಟ್ಟು ಪರಾರಿಯಾಗಿದ್ದ. ಸಂತ್ರಸ್ತೆಯು ಮುಖ್ಯ ಆರೋಪಿಯೊಂದಿಗೆ ಒಡನಾಟ ಇಟ್ಟುಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಬೇರೆಯವರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದೂ ಮಾಹಿತಿ ನೀಡಿದ್ದಾರೆ.

ಯುವತಿಯ ತಾಯಿ ದೂರು ದಾಖಲಿಸಿದ್ದಾರೆ. ಕಾಲೇಜಿನಿಂದ ಮನೆಗೆ ಕಾರ್ ನಲ್ಲಿ ಡ್ರಾಪ್ ನೀಡುವುದಾಗಿ ಯುವಕ ಕರೆದಿದ್ದರಿಂದ ತಮ್ಮ ಮಗಳು ವಾಹನವೇರಿದ್ದಳು. ನಂತರ ಅದರಲ್ಲಿದ್ದ ಮೂವರು ಲೈಂಗಿಕ ದೌರ್ಜನ್ಯವೆಸಗಿ, ಅಮತಾಲಿ ಬೈಪಾಸ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ, ಮಹಿಳಾ ಮೋರ್ಚಾ ನಾಯಕಿಯರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಪಿಯಾ ದತ್ತ, ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ್ದಾರೆ.

ತಾವು ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ನಿರ್ದೇಶನದಂತೆ ಆಸ್ಪತ್ರೆಗೆ ಆಗಮಿಸಿರುವುದಾಗಿ ತಿಳಿಸಿದ ಅವರು, ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.