ಮನೆ ಭಾವನಾತ್ಮಕ ಲೇಖನ ಕಷ್ಟ ಬಂತೆಂದು ಕೊರಗ ಬೇಡ

ಕಷ್ಟ ಬಂತೆಂದು ಕೊರಗ ಬೇಡ

0

ಸಿಹಿ ಯಾವಾಗಲೂ ಮಧುರ. ಅದೇ ಕಹಿ ಅಷ್ಟೇ ದುಸ್ತರ. ಕಷ್ಟದ ಕಾಲ ಬಂತೆಂದು ಮರುಗಬೇಡ. ಬದಲಿಗೆ ಜೀವನ ಅವಲೋಕನೆಗೆ ದೇವರಿತ್ತ ಅವಕಾಶ ಎಂದು ತಿಳಿದುಕೊಂಡು ನೆಮ್ಮದಿಯಿಂದಿರಿ. ಕಷ್ಟದ ಕಾಲದಲ್ಲಿಎಚ್ಚರದಿಂದ್ದರೆ ಅತ್ಯುತ್ತಮ ಅನುಭವ ನಿಮ್ಮದಾಗಿಸಿಕೊಳ್ಳುವಿರಿ. ಯಾವ ಕಾರಣಕ್ಕೆ ಕಷ್ಟ ಬಂದಿದೆ, ಯಾವ ಕಾರಣಕ್ಕೆ ಜನ ನಿಮ್ಮನ್ನು ದೂರ ಮಾಡಿದ್ದಾರೆ, ನಿಮ್ಮ ದುರ್ಗತಿಗೆ ಕಾರಣವೇನು, ಯಾವ ಕಾರಣಕ್ಕೆ ಕಾಯಿಲೆ, ಕಸಾಲೆ ಕಾಡುತ್ತಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆದಾಗ ಕಷ್ಟ ಕೋಟಲೆಗಳು ನಿಮ್ಮಿಂದ ತಾನಾಗೇ ದೂರ ಸರಿಯುತ್ತವೆ.

Join Our Whatsapp Group

ಉದಾ: ನಿಮ್ಮ ಕಾಲಿಗೆ ಪೆಟ್ಟಾಗಿದೆ ನಡೆಯಲಿಕ್ಕೆ ಆಗುತ್ತಿಲ್ಲಎಂದುಕೊಳ್ಳೋಣ. ಕಾಲಿನ ಯಾವ ಭಾಗದಲ್ಲಿ ಪೆಟ್ಟಾಗಿದೆ ಎಂದು ಗಮನಿಸಿ ಅದಕ್ಕೆ ಚಿಕಿತ್ಸೆ ನೀಡಬೇಕೇ ಹೊರತು ಅಯ್ಯೋ… ನನ್ನ ಕಾಲಿಗೆ ಪೆಟ್ಟಾಗಿದೆ ನಡೆಯಲಿಕ್ಕೇ ಆಗುತ್ತಿಲ್ಲ ದುರ್ವಿಧಿಯೇ ಎಂದು ದೂರುವುದಲ್ಲ. ನೋವನ್ನು ನಿರ್ವಹಿಸಬೇಕು. ಅದರ ಪರಿಹಾರಕ್ಕೆ ಶಮನ ಮಾರ್ಗಗಳನ್ನು ಕಂಡುಕೊಳ್ಳಬೇಕು. ಮನಸ್ಸನ್ನು ನೋವಿನಿಂದ ಬೇರೆ ಕಡೆಗೆ ತಿರುಗಿಸಲು ಯತ್ನಿಸಬೇಕು. ಯಾವಾಗ ನಮಗೆ ಬಂದೊದಗಿದ ತೊಂದರೆಯೇ ಪರ್ವತದಷ್ಟು ದೊಡ್ಡದು ಎಂದು ಭಾವಿಸುತ್ತೇವೋ ಅಲ್ಲಿಯವರೆಗೆ ಅದು ದೊಡ್ಡದಾಗಿಯೇ ಕಾಣುತ್ತದೆ. ಅದನ್ನು ನಿರ್ಲಕ್ಷಿಸಿದರೆ ಅದೂ ಸಹ ತಾನಾಗೇ ಬದಿಗೆ ಸರಿಯುತ್ತದೆ. ಹಾಗಾಗಲು ಕಾರಣವಿಷ್ಟೇ…. ದೇಹದೊಂದಿಗೆ ನಿಮ್ಮನ್ನು ಗುರುತಿಸಿಕೊಂಡಾಗ ಬಾಧೆ ಕಾಣುತ್ತದೆ. ಅದೇ ದೇಹವು ನಾನಲ್ಲ ಎಂದುಕೊಂಡರೆ ಅದರ ಸುಳಿವೇ ಇರುವುದಿಲ್ಲ.

ಕಷ್ಟ ಎನ್ನುವುದು ದೀಪವಿದ್ದಂತೆ. ನಮ್ಮ ದೃಷ್ಟಿಯೆಲ್ಲವೂ ಜ್ಯೋತಿಯ ಬೆಳಕಿನತ್ತ ಹರಿಯುತ್ತದೆಯೇ ಹೊರತು ಅದರ ಕೇಂದ್ರಬಿಂದುವಿನತ್ತ ಅಲ್ಲ. ಜ್ಯೋತಿಯ ಬೆಳಗುವಿಕೆ ಒಂದು ಬಿಂದುವಿಗೆ ಮಾತ್ರ ಸೀಮಿತ. ಆದರೆ ನಾವು ದೀಪದ ಬಿಂದುವನ್ನು ಮರೆತು ಸುತ್ತ ಹರಡಿದ ಬೆಳಕಿನತ್ತ ಗಮನ ಹರಿಸುತ್ತೇವೆ. ಇಷ್ಟೊಂದು ಬೆಳಕಾ ಎಂದು ವ್ಯಥೆ ಪಡುತ್ತೇವೆ ಅಥವಾ ಸಂಭ್ರಮಿಸುತ್ತೇವೆ.

ಕಣ್ಣುಮುಚ್ಚಿ ಅನುಭವಿಸಿ

ನೋವಾದಾಗ ಒಂದು ಕ್ಷಣ ಕಣ್ಣುಮುಚ್ಚಿ. ನೋವಿನ ಅನುಭವ ಎಲ್ಲಿಯಾಗುತ್ತಿದೆ ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ ನೋವನ್ನು ದೇಹದೊಂದಿಗೆ ಕಾಣಲು ಬಯಸುತ್ತೇವೋ ಹೊರತು ದೇಹದೊಳಗಿನಿಂದ ನೋಡಲು ಬಯಸುವುದಿಲ್ಲ.

ನೀವಿಲ್ಲಿ ಪ್ರಶ್ನಿಸಬಹುದು. ನಾನೇನೋ ದೇಹದೊಳಗಿನಿಂದ ಗಾಯವನ್ನು ನೋಡುತ್ತೇನೆ. ಆದರೆ ಬೇರೆಯವರ ಕಣ್ಣಿಗೆ ಕಾಣುತ್ತದಲ್ಲ. ಅದಕ್ಕೇನು ಹೇಳುತ್ತೀರಿ? ಎಂದು. ನಾನು ಹೇಳುವುದಿಷ್ಟು. ಬೇರೆಯವರು ಏನನ್ನುತ್ತಾರೆ ಎನ್ನುವುದಕ್ಕಿಂತ ನಿಮ್ಮೊಳಗೆ ನೀವು ಎಷ್ಟರ ಮಟ್ಟಿಗೆ ನೋಡಿಕೊಳ್ಳಬಲ್ಲಿರಿ ಎಂಬುದು ಮುಖ್ಯ. ಉಳಿದುದೆಲ್ಲವೂ ಗೌಣ. ನಿಮಗೆ ಕೈಯಿದೆ. ಕೈ ಬೆರಳುಗಳು ನೀಳವಾಗಿವೆ ಎಂಬುದನ್ನು ಕಣ್ಣು ಮುಚ್ಚಿಕೊಂಡು ಕಾಣಬಹುದು. ಅದಕ್ಕಾಗಿ ದೇಹವನ್ನು ಹೊರಗಿನಿಂದ ನೋಡುವ ಅವಶ್ಯಕತೆಯಿಲ್ಲ.

ನೋವು ಬಾಹ್ಯೇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಬದಲಿಗದು ಅಂತರಂಗದ ಅನುಭವಕ್ಕೆ ಬರುತ್ತದೆ. ಆದರೆ ನೋವಿನ ಅನುಭವ ಬಾಹ್ಯ ಶರೀರದಲ್ಲಿ ಪಸರಿಸುತ್ತದೆ. ಅಂದರೆ ದೀಪದ ಬೆಳಕು ಒಳಗೆ ಬೆಳಗಿದರೂ, ಅದರ ಕಿರಣಗಳ ಪ್ರಕಾಶ ಹೊರಗೆ ಹರಡುತ್ತದೆ. ನಾವು ದೇಹವನ್ನು ಹೊರಗಿನಿಂದ ನೋಡಲು ಬಯಸುತ್ತೇವೆ. ಹಾಗಾಗಿ ನಮಗೆ ಅದರ ಪ್ರತಿಫಲನವಷ್ಟೇ ಕಾಣುತ್ತದೆ.

ಬದಲಿಗೆ ನಿಮ್ಮೊಳಗೆ ನೀವು ಗಮನಿಸಿ. ಅಲ್ಲಿನಡೆಯುತ್ತಿರುವ ಉಸಿರಾಟ ಕ್ರಿಯೆ, ಅಂಗಾಂಗಗಳ ಕ್ರಿಯಾಶೀಲತೆಯನ್ನು ಗಮನಿಸುತ್ತಾ ಹೋಗಿ. ಹಸಿವು, ದೇಹ ಭಾರವಾದ ಅನುಭವವನ್ನು ಸೂಕ್ಷವಾಗಿ ಒಳಗಿನಿಂದಲೇ ಗಮನಿಸಿ. ಒಮ್ಮೆ ಆಂತರ್ಯದಲ್ಲಿ ನೋವನ್ನು ಗಮನಿಸಿದ ಕೂಡಲೇ ಎರಡು ಸಂಗತಿಗಳು ವೇದ್ಯವಾಗುತ್ತವೆ. ಮೊದಲನೆಯದಾಗಿ ನೋವು ಇದ್ದಲ್ಲೇ ಇರುತ್ತದೆಯೇ ಯಾವುದೋ ಒಂದು ಬಿಂದುವಿನ ಭಾಗದಲ್ಲಿ ಕೇಂದ್ರೀಕೃತವಾಗಿರುತ್ತದೆಯೇ ಹೊರತು ಅದರ ಶರೀರದ ಬೇರೆ ಭಾಗಗಳಿಗೆ ಪಸರಿಸುವುದಿಲ್ಲ. ಅಂದರೆ ಯಾವ ಬಿಂದುವಿನಲ್ಲಿ ನೋವು ಕೇಂದ್ರೀಕೃತವಾಗಿದೆಯೋ ಅಲ್ಲಿಯೇ ನಿಮ್ಮ ಗಮನವನ್ನು ಹರಿಸಿ. ಆ ಬಿಂದುವಿನ ಭಾಗದಿಂದ ನೋವಿನ ತೀವ್ರತೆ ಕಡಿಮೆಯಾಗುತ್ತಿದೆ. ಕ್ಷಣಕ್ಷಣಕ್ಕೂ ಕರಗಿಹೋಗುತ್ತಿದೆ ಎಂದು ಭಾವಿಸಿ. ಕೆಲ ಕ್ಷಣಗಳಲ್ಲೇ ನೋವು ಮಾಯವಾಗುತ್ತದೆ.

ಜಾಗೃತಾವಸ್ಥೆಯಲ್ಲಿ ಅವಲೋಕಿಸಿ

ಜಾಗೃತಾವಸ್ಥೆಯಲ್ಲಿ ನೋವಿರುವ ಪ್ರದೇಶ ತೀರಾ ಚಿಕ್ಕದಾಗಿರುತ್ತದೆ. ನೋವಿನ ಬಾಧೆ ತೀರಾ ಗೌಣವೆನಿಸುತ್ತದೆ. ಅಂತಹ ಸ್ಥಿತಿಯಲ್ಲಿ ನೋವನ್ನು ಬದಿಗೆ ಸರಿಸುವುದು ಸುಲಭ. ಅದೇ ನಾವು ಬಾಹ್ಯೇಂದ್ರಿಯಗಳತ್ತ ಗಮನ ಹರಿಸಿದಾಗ ಅದರ ತೀವ್ರತೆ ಮತ್ತಷ್ಟು ಸಂಕಟಕ್ಕೆ ಈಡುಮಾಡುತ್ತದೆ.

ದುಃಖವನ್ನು ಅನುಭವಿಸಿದಂತೆಯೇ ಸುಖವನ್ನೂ ಜಾಗೃತ ಸ್ಥಿತಿಯಲ್ಲಿ ಅನುಭವಿಸಬೇಕು. ಹಾಗೆ ಅನುಭವಿಸಿದಾಗ ಸುಖವೂ ಸಹ ತೀರಾ ಗೌಣವಾಗೇ ಕಾಣುತ್ತದೆ. ಇದೇ ದೃಷ್ಟಿಯಲ್ಲಿ ಕಷ್ಟವನ್ನು, ಸಂಕಷ್ಟದ ಕ್ಷಣಗಳನ್ನು ಕಳೆದಾಗ ಅದೆಂದಿಗೂ ನಮಗೆ ದೊಡ್ಡದೆನಿಸುವುದೇ ಇಲ್ಲ. ಎಲ್ಲಿಯವರೆಗೂ ಜಾಗೃತಾವಸ್ಥೆಯಲ್ಲಿ ನಾವಿರುತ್ತೇವೋ ಅಲ್ಲಿಯವರೆಗೂ ನೋವು, ಸಂಕಟಗಳು ಬಾಧಿಸುವುದೇ ಇಲ್ಲ. ಕಷ್ಟಕೋಟಲೆಗಳ ಸುಳಿಯಲ್ಲಿ ಸಿಲುಕುವುದೇ ಇಲ್ಲ. ಒಂದು ಹಂತದಲ್ಲಿ ಶ್ರೀಕೃಷ್ಣ ಹೇಳಿದಂತೆ ಸುಖ, ದುಃಖ, ಶೀತ, ಉಷ್ಣಗಳೆಲ್ಲವೂ ಒಂದೇ ಮಟ್ಟದೆನಿಸುತ್ತದೆ. ಕ್ರಮೇಣ ಅವೆರಡರ ನಡುವೆ ಬೇಧ ಕಾಣುವುದೇ ಇಲ್ಲ.