ಮನೆ ರಾಜಕೀಯ ಬೆಲೆಯೇರಿಕೆ ಮುಕ್ತ ಭಾರತಕ್ಕೆ ಕಾಂಗ್ರೆಸ್ ಆಗ್ರಹ

ಬೆಲೆಯೇರಿಕೆ ಮುಕ್ತ ಭಾರತಕ್ಕೆ ಕಾಂಗ್ರೆಸ್ ಆಗ್ರಹ

0

ಬೆಂಗಳೂರು: ಪೆಟ್ರೋಲ್, ಡಿಸೇಲ್, ಎಲ್ ಪಿಜಿ, ಸಿನ್ ಜಿ ಮತ್ತು ಪಿಎನ್ ಜಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ವಿರುದ್ಧ ಎಐಸಿಸಿ ದೇಶಾದ್ಯಂತ ಹಮ್ಮಿಕೊಂಡಿರುವ “ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ”ದ ಭಾಗವಾಗಿ ಕೆಪಿಸಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದಿರು ಗುರುವಾರ ಪ್ರತಿಭಟನೆ ನಡೆಸಿತು.

ದ್ವಿಚಕ್ರ ವಾಹನ ಹಾಗೂ ಅಡುಗೆ ಅನಿಲ ಸಿಲಿಂಡರ್ ಗೆ ಹೂವಿನ ಹಾರ ಹಾಕಿ ಪೂಜೆ ಮಾಡಿ ಪ್ರತಿಭಟನೆ ನಡೆಸಿದರು.

ಇದಕ್ಕೂ ಮೊದಲು ಶಿವಕುಮಾರ್ ಅವರು ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದ ಬಳಿ ಅಡುಗೆ ಅನಿಲದ ಸಿಲಿಂಡರ್ ಗೆ ಹೂಹಾರ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಪ್ರತಿಭಟನೆ ಮಾಡಿದರು. ನಂತರ ಕೆಪಿಸಿಸಿ ಕಚೇರಿಯಲ್ಲಿ ದ್ವಿಚಕ್ರ ವಾಹನ ಹಾಗೂ ಅಡುಗೆ ಸಿಲಿಂಡರ್ ಗೆ ಗಂಟೆ ಬಾರಿಸಿ ಪೂಜೆ ಮಾಡಿದರು.

 ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಮಾರ್ಚ್ 31 ಆರ್ಥಿಕ ವರ್ಷ ಮುಕ್ತಾಯದ ದಿನ. ಹೀಗಾಗಿ ಇಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಕಳೆದ 11 ದಿನಗಳಲ್ಲಿ ಕೇಂದ್ರ ಸರ್ಕಾರ 10 ಬಾರಿ ಇಂಧನ ಬೆಲೆ ಏರಿಕೆ ಮಾಡಿದೆ. ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಎಲ್ಲರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರ, ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಳಕ್ಕೆ ಹೋಗಿದೆ. ಹೀಗಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ವಾಹನ ಸವಾರರಿಂದ ಹಿಡಿದು, ಗೃಹಿಣಿಯವರೆಗೂ ಎಲ್ಲರೂ ದಿನನಿತ್ಯ ನೋವು ಅನುಭಿಸುತ್ತಿದ್ದಾರೆ. ಈಗಾಗಲೇ ಸುಮಾರು 35 ರೂ. ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ 111 ರೂ. ಮುಟ್ಟಿದೆ. ಇದರ ವಿರುದ್ಧ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದ್ದು, ನಮ್ಮ ಮನೆಗಳ ಮುಂದೆ ಅಡುಗೆ ಅನಿಲ ಸಿಲಿಂಡರ್, ವಾಹನಗಳಿಗೆ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದೇವೆ ಎಂದು ಹೇಳಿದರು.

ಪಂಚರಾಜ್ಯ ಚುನಾವಣೆ ನಡೆಯುವಾಗ ತಡೆಯಲಾಗಿದ್ದ ಬೆಲೆ ಏರಿಕೆ, ಫಲಿತಾಂಶ ಬಂದ ನಂತರ ಮತ್ತೆ ಆರಂಭವಾಗಿದೆಯೇ ಎಂಬ ಪ್ರಶ್ನೆಗೆ, ‘ಅವರು ತಡೆ ಹಿಡಿದಿದ್ದರೋ ಇಲ್ಲವೋ, ಜನರಿಗಂತೂ ಪ್ರಾಣ ಹಿಂಡುತ್ತಿದ್ದಾರೆ. ನಮ್ಮ ಹಳ್ಳಿಕಡೆ ಒಂದು ಮಾತಿದೆ. 100 ಚಪ್ಪಲಿ ಏಟು ತಿನ್ನಬಹುದು, ಆದರೆ ದುಡ್ಡಿನ ಏಟು ಮಾತ್ರ ತಡೆಯಲು ಆಗುವುದಿಲ್ಲ. ಅದೇ ರೀತಿ ಈ ಸರ್ಕಾರ ದಿನನಿತ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ’ ಎಂದು ಆರೋಪಿಸಿದರು.

ಜನರ ಸಮಸ್ಯೆಗಳ ಬದಲು ಭಾವನಾತ್ಮಕ ವಿಚಾರ ಚುನಾವಣೆ ಅಜೆಂಡಾ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಅವರು ಸಮಾಜ ಒಡೆಯುವವರಾದರೆ, ನಾವು ಸಮಾಜವನ್ನು ಒಂದು ಮಾಡುತ್ತೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ’ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ. ಕೇ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ ಮತ್ತಿತರ ಮುಖಂಡರು ಭಾಗವಹಿದ್ದರು.