ಮನೆ ಅಪರಾಧ ತುಮಕೂರಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ಕುಟುಂಬಸ್ಥರು, ಆರೋಪಿಗಳ ಬಂಧನ

ತುಮಕೂರಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ಕುಟುಂಬಸ್ಥರು, ಆರೋಪಿಗಳ ಬಂಧನ

0

ತುಮಕೂರು: ತುಮಕೂರಿನಲ್ಲಿ ಮರ್ಯಾದಾ ಹತ್ಯೆ ಪ್ರಕರಣ ವರದಿಯಾಗಿದ್ದು, ಅನ್ಯ ಜಾತಿ ಯುವಕನ ಜೊತೆ ಪ್ರೀತಿಸಿ ಓಡಿಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಕುಟುಂಬಸ್ಥರು ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಚಿಕ್ಕಹೆಡಿಗೆಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ನೇತ್ರಾವತಿ (17) ಕೊಲೆಯಾದ ಅಪ್ರಾಪ್ತ ಬಾಲಕಿ.

ಕೊಲೆಯಾದ ಬಾಲಕಿ ತಂದೆ ಪರಶುರಾಮ, ಸಹೋದರ ಶಿವರಾಜು, ಚಿಕ್ಕಪ್ಪ ತುಕಾರಾಂ ಬಂಧಿತ ಆರೋಪಿಗಳು.

ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೇತ್ರಾವತಿ.ಪ್ರಥಮ ಪಿಯುಸಿ ಓದುತ್ತಿದ್ದಳು.

ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಯುವಕ ಕುಮಾರ್ (21) ಎಂಬಾತನನ್ನು ನೇತ್ರಾವತಿ ಪ್ರೀತಿಸುತ್ತಿದ್ದಳು. 7 ನೇ ತಾರೀಖಿನಂದು  ಇಬ್ಬರು ಮನೆ ಬಿಟ್ಟು ಓಡಿಹೋಗಿದ್ದರು. ಮಾರನೇ ದಿನ ಇಬ್ಬರನ್ನು ಕರೆಸಿ ಎರಡು ಕುಟುಂಬಗಳ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ, ಬಾಲಕಿಯ ಸಹವಾಸಕ್ಕೆ ಬಾರದಂತೆ ಯುವಕನಿಗೆ ಎಚ್ಚರಿಕೆ ನೀಡಲಾಗಿತ್ತು.

ಬಳಿಕ ಹುಡುಗಿಯನ್ನು ಕುಟುಂಬಸ್ಥರು  ಮನೆಗೆ ಕರೆತಂದಿದ್ದರು. ಅದೇ ದಿನ ರಾತ್ರಿ ಅಪ್ರಾಪ್ತ ಬಾಲಕಿಯನ್ನು ಬಾಲಕಿಯ ತಂದೆ, ಸಹೋದರ, ಹಾಗೂ ಚಿಕ್ಕಪ್ಪ ಸೇರಿ ನೇಣುಬಿಗಿದು ಕೊಲೆ‌ ಮಾಡಿದ್ದಾರೆ. ಬಳಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದಾರೆ. ಬಳಿಕ ಕೊಲೆಗೆ ಯಾವುದೇ ಕುರುಹು ಸಿಗದಂತೆ ಮೃತದೇಹವನ್ನ ಬೆಂಕಿಯಿಂದ ಸುಟ್ಟುಹಾಕಿದ್ದಾರೆ.

ಆದರೆ ಗ್ರಾಮಸ್ಥರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಚೇಳೂರು ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಶಿರಾ ಡಿವೈಎಸ್ ಪಿ ನವೀನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.  ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306), ಸಾಕ್ಷೃ ನಾಶ (ಐಪಿಸಿ 201) ಅಡಿ ಪ್ರಕರಣ ದಾಖಲಿಸಿ ಕೊಲೆಗೈದಿದ್ದ ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

ಚೇಳೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.