ಬೆಂಗಳೂರು ನಿರ್ಮಾಣವಾಗಿ 1300ಕ್ಕೂ ಹೆಚ್ಚು ವರ್ಷಗಳು ಕಳೆದಿವೆ ಎಂಬುದನ್ನು ಶಾಸನಗಳು ಸಾರುತ್ತವೆ. ಬೇಗೂರಿನಲ್ಲಿ ದೊರೆತಿರುವ ಶಾಸನ 9ನೇ ಶತಮಾನದಲ್ಲೇ ಬೆಂಗಳೂರು ಇತ್ತೆಂಬುದನ್ನು ಸಾರಿ ಸಾರಿ ಹೇಳುತ್ತದೆ.
ಬೆಂಗಳೂರು ನಗರದ ಪ್ರಾಚೀನತೆಗೆ ಹಲವು ದೇವಾಲಯಗಳೂ ಸಾಕ್ಷಿಯಾಗಿವೆ. ಇಂಥ ಪುರಾತನ ದೇವಾಲಯಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ವಸಂತಪುರದ ಭೂನ್ನೀಳಾ ವಸಂತನಾಯಕಿ ಸಮೇತ ವಸಂತ ವಲ್ಲಭಸ್ವಾಮಿ ದೇವಾಲಯವೂ ಒಂದು. ಐತಿಹಾಸಿಕವಾಗಿ 1 ಸಾವಿರ ವರ್ಷಗಳ ಭವ್ಯ ಇತಿಹಾಸ ಇರುವ ಈ ಪವಿತ್ರ ಸ್ಥಳದ ಸನಿಹದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ದೇವರಕೆರೆ. ಇಲ್ಲಿ ಮಹಾಲಕ್ಷ್ಮೀ, ಪದ್ಮಾವತಿ ಸಮೇತ ಶ್ರೀ ಶ್ರೀನಿವಾಸಸ್ವಾಮಿಯವರ ಸುಂದರ ದೇವಾಲಯವಿದೆ. ಈ ದೇವಾಲಯ ಇತ್ತೀಚಿನ ನಿರ್ಮಾಣವಾದರೂ, ಇಲ್ಲಿನ ಇತಿಹಾಸ ಮತ್ತು ಮಹಿಮೆ ಬಹು ಪ್ರಾಚೀನವಾದ್ದು.
ದೇವರಕೆರೆಯ ಸ್ಥಳ ಮಹಿಮೆಯನ್ನು ತಿಳಿಯಬೇಕಾದರೆ ವಸಂತ ವಲ್ಲಭ ಸ್ವಾಮಿ ದೇವಾಲಯದ ಚರಿತ್ರೆಯತ್ತ ಪಕ್ಷಿನೋಟ ಬೀರಲೇ ಬೇಕು. ಬಹು ಹಿಂದೆ ಹಿಮಾಲಯದಲ್ಲಿ ಬದರೀಕಾಶ್ರಮದಲ್ಲಿದ್ದ ಮಾಂಡವ್ಯ ಮಹಾಮುನಿಗಳು ದಕ್ಷಿಣ ಭಾರತದಲ್ಲಿರುವ ಪವಿತ್ರ ತಾಣಗಳ ದರ್ಶನಕ್ಕಾಗಿ ಮೇಲುಕೋಟೆಗೆ ಪ್ರಯಾಣ ಬೆಳೆಸುತ್ತಾರೆ. ಹೀಗೆ ದಕ್ಷಿಣ ಪಥದಲ್ಲಿ ಸಂಚರಿಸಿ ಚಲುವನಾರಾಯಣಸ್ವಾಮಿ ದರ್ಶನ ಪಡೆದು ಹಿಂತಿರುಗುವ ಸಂದರ್ಭದಲ್ಲಿ ಧ್ಯಾನಮಗ್ನರಾಗಿದ್ದ ಮಾಂಡವ್ಯ ಮಹಾಮುನಿಗಳಿಗೆ ಶ್ರೀ ವಲ್ಲಭರಾಯಸ್ವಾಮಿ ಕಾಣಿಸಿಕೊಂಡು ಬೆಂಗಳೂರಿನ ಕಲ್ಯಾಣಪುರಿಯಲ್ಲಿ ತಾನು ನೆಲೆಸಿರುವುದಾಗಿ ತಿಳಿಸುತ್ತಾನೆ.
ಮುನಿಗಳು ಕಲ್ಯಾಣಪುರ ಅಂದರೆ ಈಗಿನ ವಸಂತಪುರದಲ್ಲಿರುವ ದೇವಾಲಯದ ಬಳಿ ಉದ್ಭವರೂಪದಲ್ಲಿ ಗೋಚರಿಸಿದ ಮನಮೋಹಕ ಮೂರ್ತಿಯನ್ನು ಕಂಡು ಮೂಖವಿಸ್ಮಿತರಾಗುತ್ತಾರೆ. ಸ್ವಾಮಿಯನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿ ನಿತ್ಯ ಅರ್ಚಿಸುತ್ತಾ, ಹತ್ತಿರದಲ್ಲೇ ಇದ್ದ ಗುಪ್ತಗಿರಿಯ ಗುಹೆಯಲ್ಲಿ ನೆಲೆಸಿ ತಪವನ್ನಾಚರಿಸುತ್ತಾರೆ. ಹೀಗೆ ಅವರು ವಸಂತಪುರದಲ್ಲಿ ನೆಲೆಸಿರುವಾಗ ನಾರಾಯಣವನದಲ್ಲಿ ಭೂವೈಕುಂಠಪತಿಯಾದ ಶ್ರೀನಿವಾಸ ದೇವರ ಕಲ್ಯಾಣ ನಡೆಯುತ್ತದೆ. ಶ್ರೀನಿವಾಸದೇವರ ವಿವಾಹ ಮಹೋತ್ಸವವನ್ನು ಕಣ್ಣಾರೆ ಕಾಣಲಿಲ್ಲವಲ್ಲ ಎಂದು ಮಾಂಡವ್ಯರು ಪರಿತಪಿಸುತ್ತಾರೆ. ಮುನಿಗಳ ಮನದಾಳವನ್ನರಿತ ಭಗವಂತ ಭೂದೇವಿ, ನೀಳಾದೇವಿ ಹಾಗೂ ವಸಂತನಾಯಕಿ ಅಮ್ಮನವರೊಂದಿಗೆ ಮಾಂಡವ್ಯರಿಗೆ ದರ್ಶನ ನೀಡುತ್ತಾರೆ. ಆ ಪ್ರದೇಶದ ರಮಣೀಯತೆಗೆ ಮನಸೋತು ಆ ಭೂಭಾಗದಲ್ಲಿದ್ದ ಐದು ಸರೋವರಗಳಲ್ಲಿ ಭೂದೇವಿ, ನೀಳಾದೇವಿ ಹಾಗೂ ವಸಂತನಾಯಕರೊಡಗೂಡಿ ಓಕುಳಿ (ವಸಂತನ್ನಾನ) ಮಾಡುತ್ತಾರೆ. ಸಪತ್ನೀಕರಾಗಿ ವಸಂತವಲ್ಲಭ ಸ್ವಾಮಿ ಸ್ನಾನ ಮಾಡಿದ ಈ ಐದು ಸರೋವರುಗಳು ಪವಿತ್ರ ಐದು ತೀರ್ಥಗಳಾಗುತ್ತವೆ. ಶಂಖತೀರ್ಥ, ಚಕ್ರತೀರ್ಥ, ಪ್ಲವತೀರ್ಥ, ದೇವತೀರ್ಥ ಹಾಗೂ ವಸಂತತೀರ್ಥ ಎಂಬ ಹೆಸರು ಪಡೆಯುತ್ತವೆ.
ಈ ಐದು ತೀರ್ಥಗಳ ಪೈಕಿ ಒಂದಾದ ದೇವತೀರ್ಥ ಇರುವ ತಾಣವೇ ಗ್ರಾಮೀಣರ ಆಡುಭಾಷೆಯಲ್ಲಿ ದೇವರಕೆರೆಯಾಗಿ ಪ್ರಸಿದ್ಧಿಪಡೆದಿದೆ. ಈ ಸ್ಥಳದಲ್ಲಿ ಪುರಾತನ ಮಂಟಪವೂ ಇದೆ. ಹಿಂದೆ ಮಾಘಮಾಸದ ಮಖಾ ನಕ್ಷತ್ರದಲ್ಲಿ ನಡೆಯುವ ಶ್ರೀವಲ್ಲಭರಾಯಸ್ವಾಮಿ ಬ್ರಹ್ಮರಥೋತ್ಸವದ ಎರಡನೇದಿನ ದೇವರಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿಯನ್ನು ಇಲ್ಲಿಗೆ ತಂದು ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ ಮರಳಿ ತೆಗೆದುಕೊಂಡು ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿತ್ತು. ಕಾರಣಾಂತರದಿಂದ ಈ ಆಚರಣೆ ವಸಂತತೀರ್ಥಕ್ಕೆ ಸ್ಥಳಾಂತರಗೊಂಡಿತು. ಈ ದೇವರ ಕೆರೆಗೆ ತನ್ನ ಹಿಂದಿನ ಪಾವಿತ್ರ್ಯತೆ ತರಲು ಕೆರೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯ 15 ವರ್ಷಗಳ ಹಿಂದೆ ಆರಂಭವಾಯಿತು. ಆಗ ನೀರಿನ ಮಧ್ಯದಲ್ಲಿದ್ದ ಮಂಟಪ ತೆರವುಗೊಳಿಸಿ ಆ ಸ್ಥಳದಲ್ಲಿ ದ್ವೀಪ ಸೃಷ್ಟಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪರಿಸರವಾದಿಗಳಾದ ಶ್ರೀ. ಯಲ್ಲಪ್ಪರೆಡ್ಡಿಯವರು, ಅವರ ಸ್ನೇಹಿತರಾದ ಶ್ರೀ ಮುನಿರೆಡ್ಡಿ ಅವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಮತ್ತೆ ಮಂಟಪ ನಿರ್ಮಿಸುವ ಆಲೋಚನೆ ಬಂತು. ಶ್ರೀ.ಮುನಿರೆಡ್ಡಿ ಅವರು ಮಂಟಪ ಕಟ್ಟಿಸಿದರು, ಆ ಮಂಟಪವನ್ನು ಹಾಗೇ ಬಿಡಲು ಮನಸ್ಸಾಗದೆ ಭಗವತ್ಪ್ರೇರಣೆಯಂತೆ ಪದ್ಮಾವತಿ, ವರಲಕ್ಷ್ಮೀ ಸಮೇತ ಶ್ರೀನಿವಾಸದೇವರನ್ನು ಪ್ರತಿಷ್ಠಾಪಿಸಲು ನಿಶ್ಚಯಿಸಿದರು. ಎಲ್ಲವೂ ಸುಸೂತ್ರವಾಗಿ ಸಾಗಿ 2000 ಇಸವಿ ಏಪ್ರಿಲ್ 26ರಂದು ಕುಂಭಾಭಿಷೇಕ, ಪ್ರತಿಷ್ಠಾಪನಾ ವಿಧಿಗಳು ವಸಂತವಲ್ಲಭಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದ ಆಗಮಿಕರೂ, ಅಲಂಕಾರ ನಿಪುಣರೂ ಆದ ಕೀರ್ತಿಶೇಷ ಶ್ರೀ ರಾಘವಭಟ್ಟರ್ ಅವರ ಮಾರ್ಗದರ್ಶನದಲ್ಲಿ ಜರುಗಿತು. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಈ ದೇವಾಲಯದಲ್ಲಿ ಪಾಂಚರಾತ್ರಾಗಮ ರೀತ್ಯ ಪೂಜಾವಿಧಿಗಳು ಜರುಗುತ್ತವೆ.
ಎಲ್ಲ ದೇವಾಲಯಗಳ ಬಳಿ ಸಾಮಾನ್ಯವಾಗಿ ಕೆರೆ, ತೊರೆ, ಸರೋವರ, ಕಲ್ಯಾಣಿ, ಪುಷ್ಕರಣಿಗಳಿದ್ದರೆ, ಈ ದೇವಾಲಯದ ಸುತ್ತಲೂ ಕೆರೆಯಿದ್ದು ನಡುಗಡ್ಡೆಯಲ್ಲಿ ದೇವಾಲಯವಿದೆ. ಈ ದೇವಾಲಯಕ್ಕೆ ಬರುವ ಭಕ್ತರನ್ನು ವರಮಹಾಲಕ್ಷ್ಮೀ, ಪದ್ಮಾವತಿ ಸಮೇತನಾದ ಶ್ರೀ. ಶ್ರೀನಿವಾಸದೇವರು ಹರಸುತ್ತಾ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾರೆ. ಈ ದೇವಾಲಯದಲ್ಲಿ 12 ದಿನಗಳ ಕಾಲ 12 ಪ್ರದಕ್ಷಿಣೆ ಹಾಕಿದೆ ಮನದ ಬಯಕೆಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ವಯಸ್ಸಾದರೂ ಮದುವೆಯಾಗವರು, ಮದುವೆಯಾಗಿ ಬಹುವರ್ಷಕಳೆದರೂ ಮಕ್ಕಳಾಗದವರು, ವಿದ್ಯಾವಂತರಾಗಿದ್ದೂ ಉದ್ಯೋಗ ದೊರಕದ ನಿರುದ್ಯೋಗಿಗಳು, ವಿವಿಧ ಕಾರಣಗಳಿಂದ ಮನೋಕ್ಲೇಶಕ್ಕೆ ಒಳಗಾದವರು, ಮನೆಕಟ್ಟಲು ಕಷ್ಟಪಟ್ಟವರು ಇಲ್ಲಿ ಬಂದು ದೇವರನ್ನು ಪೂಜಿಸಿ ಪರಿಹಾರ ಕಂಡುಕೊಂಡಿದ್ದಾರೆ. ದೇವರಿಗೆ ನಡೆಯುವ ಕಲ್ಯಾಣೋತ್ಸವದ ಕಂಕಣ ಕಟ್ಟಿಕೊಂಡರೆ ನಲವತ್ತೆಂಟು ದಿನಗಳಲ್ಲಿ ವಿವಾಹ ನಿಶ್ಚಯವಾಗುತ್ತದೆ ಎಂದು ಅರ್ಚಕರು ಹೇಳುತ್ತಾರೆ.
ದೇವಾಲಯದ ಮತ್ತೊಂದು ವಿಶೇಷವೆಂದರೆ ಶ್ರೀಮಹಾವಿಷ್ಣುವಿನ ವಾಹನ ಗರುಡಪಕ್ಷಿ ಈ ದೇವಾಲಯವನ್ನೇ ವಾಸಸ್ಥಾನ ಮಾಡಿಕೊಂಡಿದೆ. ದೇವಾಲಯದ ಆವರಣದಲ್ಲಿರುವ ಮರದಲ್ಲಿ ಗರುಡ ಪಕ್ಷಿಗಳು ಗೂಡು ಕಟ್ಟಿ ವಾಸಿಸುತ್ತಿವೆ. ಪ್ರತಿ ನಿತ್ಯ ಆಲಯದ ಗೋಪುರದ ಮೇಲೆ ಪ್ರದಕ್ಷಿಣೆ ಹಾಕುವ ಈ ಗರುಡ ಪಕ್ಷಿಗಳು, ರಥೋತ್ಸವದ ವೇಳೆ ರಥದ ಮೇಲೂ ಸುತ್ತು ಹಾಕುತ್ತಾ ಗೋವಿಂದ ಗೋವಿಂದ ಎನ್ನುತ್ತವೆ. ಈ ಪಕ್ಷಿಗಳ ದರ್ಶನ ಮಾತ್ರದಿಂದ ಸಪ್ತಜನ್ಮ ಕೃತ ಪಾಪಗಳು ನಾಶವಾಗುತ್ತವೆ ಎಂಬುದು ಸ್ಥಳೀಯರ ನಂಬಿಕೆ.
ದೇವಾಲಯದಲ್ಲಿ ಪ್ರತಿ ಪೌರ್ಣಿಮೆಯ ದಿನ ಶ್ರೀ ಸತ್ಯನಾರಾಯಣ ವ್ರತ ವೈಭವದಿಂದ ನಡೆಯುತ್ತದೆ. ಸತ್ಯನಾರಾಯಣ ವ್ರತ ಕಥೆಯಲ್ಲಿ ಶ್ರೀಸತ್ಯನಾರಾಯಣ ಪೂಜೆಯನ್ನು ನದಿ, ಕೆರೆ ತಟದಲ್ಲಿ ಮಾಡುವುದು ಶ್ರೇಷ್ಠ ಎಂಬ ಉಲ್ಲೇಖವಿದೆ. ಇಲ್ಲಿ ಇಡೀ ದೇವಾಲಯವನ್ನು ನೀರು ಸುತ್ತುವರಿದಿದ್ದು ಇಲ್ಲಿ ನಡೆಯುವ ಪೂಜೆ ಅತ್ಯಂತ ಶ್ರೇಷ್ಠ ಎಂದು ಅರ್ಚಕರು ಹೇಳುತ್ತಾರೆ.
ದೇವಾಲಯ ನಿರ್ಮಿಸಿದ ಮಹಾವಿಷ್ಣುವಿನ ಪರಮ ಭಕ್ತರಾದ ಶ್ರೀ ಮುನಿರೆಡ್ಡಿ ಅವರು ಈಗ್ಗೆ 6 ವರ್ಷಗಳ ಹಿಂದೆ ಪ್ರಥಮ ಏಕಾದಶಿಯಂದು ವೈಕುಂಠವಾಸಿಗಳಾದರು. ಪ್ರಥಮ ಏಕಾದಶಿಯಂದು ಪ್ರಾಣತ್ಯಾಗ ಮಾಡಿ, ದ್ವಾದಶಿಯಂದು ಸಂಸ್ಕಾರ ನಡೆದರೆ ಅವರಿಗೆ ಪುನರ್ಜನ್ಮವಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಇಂಥ ಪವಿತ್ರದಿನ ನಿಧನಹೊಂದಿದ ಅವರು ಭಗವಂತನ ಸಾನ್ನಿಧ್ಯ ಸೇರಿದ್ದಾರೆಂದೇ ಹಿರಿಯರು ಹೇಳುತ್ತಾರೆ.
ದಿವಂಗತ ಮುನಿರೆಡ್ಡಿ ಅವರು ಇಬ್ಬರು ಪುತ್ರರಾದ ಶ್ರೀ. ಎಂ. ರಾಜಪ್ಪರೆಡ್ಡಿ ಹಾಗೂ ಶ್ರೀ.ಎಂ.ಆನಂದರೆಡ್ಡಿ ಅವರು ದೇವಾಲಯದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದಾರೆ. ವಸಂತಪುರ ದೇವಾಲಯದ ಅರ್ಚಕರಾಗಿದ್ದ ಕೀರ್ತಿಶೇಷ ಶ್ರೀರಾಘವಭಟ್ಟರವರ ತೃತೀಯ ಪುತ್ರ ಶ್ರೀ.ವಿ.ಆರ್. ಸುದರ್ಶನ ಭಟ್ಟರ್ ಅವರು ಇಲ್ಲಿ ಅರ್ಚಕರಾಗಿದ್ದು ಸ್ವಾಮಿಯ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂಲ ಮೂರ್ತಿಯನ್ನು ಕಾಣಲು ಎರಡು ಕಣ್ಣು ಸಾಲದು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.