ಮನೆ ಅಪರಾಧ ಸಾರಿಗೆ ಇಲಾಖೆಯ ಅತೀ ಸುರಕ್ಷಾ ನೋಂದಣಿ ಫಲಕ ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರಕ್ಕೆ ನಾಂದಿ: ದೂರು...

ಸಾರಿಗೆ ಇಲಾಖೆಯ ಅತೀ ಸುರಕ್ಷಾ ನೋಂದಣಿ ಫಲಕ ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರಕ್ಕೆ ನಾಂದಿ: ದೂರು ದಾಖಲು

0

ಬೆಂಗಳೂರು: ಅತೀ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರಕ್ಕೆ ನಾಂದಿ ಹಾಡಿರುವ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವ್ವಿದ್ಯಾರ್ಥಿಗಳ ಒಕ್ಕೂಟ ದೂರು ನೀಡಿದೆ.

Join Our Whatsapp Group

ವಾಹನ ಕಳ್ಳತನ ತಡೆಯುವುದು, ಕದ್ದ ವಾಹನಗಳನ್ನು ಬಳಸಿ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ವಾಹನಗಳ ನಂಬರ್ ಪ್ಲೇಟ್’ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ಕರ್ನಾಟಕದಲ್ಲೂ ಜಾರಿಗೆ ಬರುತ್ತಿದೆ.

ಅತೀ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಬಂಧ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಪಡಿಸಿದ್ದು, ಇದು ಕೇಂದ್ರ ಸರ್ಕಾರದ ಸೂಚನೆಗಳಿಗೆ ವಿರುದ್ಧವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಸಾರಿಗೆ ಇಲಾಖೆ ಸಿದ್ಧಪಡಿಸಿರುವ ನಿಯಮಗಳಿಂದಾಗಿ ಇಡೀ ಯೋಜನೆಯೇ ಬುಡಮೇಲಾಗಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕವೂ ಎದುರಾಗಿದೆ.

HSRP ಯೋಜನೆ ಜಾರಿಗೆ ಪೂರಕವಾಗಿ ದೇಶದಲ್ಲಿ ಹಲವಾರು ಕಂಪನಿಗಳು ಈ ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್’ಗಳನ್ನು ತಯಾರಿಸುತ್ತಿವೆ. ಈ ಪೈಕಿ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಈ HSRP ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರೀ ಭ್ರಷ್ಟಾಚಾರದ ಉದ್ದೇಶದಿಂದ ಈ ರೀತಿಯ ಅಕ್ರಮಕ್ಕೆ ಹುನ್ನಾರ ನಡೆದಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವ್ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ಅವರು ನೀಡಿರುವ ದೂರಿನಲ್ಲಿತಿಳಿಸಿದ್ದಾರೆ.

ಎಲ್ಲಾ ವಾಹನಗಳಲ್ಲಿ HSRP ಸಾಧನ ಅಳವಡಿಕೆ ಕಡ್ಡಾಯವಾಗಿದ್ದು, ಅದನ್ನು ಪೂರೈಸಲು ವಾಹನ ತಯಾರಿಕಾ ಸಂಸ್ಥೆ ಅಥವಾ ಡೀಲರ್ ಗಳಿಗೆ ಅವಕಾಶ ಕಲ್ಪಿಸಲು ಸಾರಿಗೆ ಇಲಾಖೆಯಿಂದ ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ. ವಾಸ್ತವ ಏನೆಂದರೆ, ವಾಹನ ತಯಾರಕಾರು HSRP ತಯಾರಿಸುವುದಿಲ್ಲ, ಬದಲಾಗಿ ಇತರರ ತಯಾರಕರಿಂದ ಪಡೆದು ವಾಹನಗಳಿಗೆ ಅಳವಡಿಸಿ ಪೂರೈಸಬೇಕಿದೆ. ಅದರಲ್ಲೂ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ 20 HSRP ತಯಾರಿಕಾ ಸಂಸ್ಥೆಗಳ ಪೈಕಿ ಒಬ್ಬರ ನಿಯಂತ್ರಣದಲ್ಲೇ ಇರುವ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಸಾರಿಗೆ ಇಲಾಖೆ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಈ ವಿಚಾರದಲ್ಲಿ ಪಾರದರ್ಶಕ ನಡೆ ಅನುಸರಿಸದೆ ಭಾರೀ ಪ್ರಮಾಣದ ಲಂಚದ ಆಸೆಗೆ ಬಿದ್ದು ಅಧಿಕಾರಿಗಳು ಹಾಗೂ ಪ್ರಭಾವಿಗಳ ಸಂಚಿನಿಂದಾಗಿ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ಅವರು ಈ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸ ವಾಹನಗಳಲ್ಲಿ HSRP ಗೊಂದಲ ಇಲ್ಲ. ಆದರೆ ಹಳೆಯ ವಾಹನಗಳಿಗಷ್ಟೇ HSRP ಸವಾಲು ಇರುವುದು. ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಇಷ್ಟೂ ವಾಹನಗಳಿಗೆ HSRP ಅಳವಡಿಸಬೇಕಿದ್ದು, ಇದರ ಬೆಲೆ 400ರಿಂದ 950 ರೂಪಾಯಿವರೆಗೆ ಇದೆ. ಪ್ರತೀ HSRPಯಲ್ಲಿ ಶೇಕಡಾ 50ರಷ್ಟು ಲಾಭವಿದ್ದು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ದೋಚಲು ಕೆಲವು ಕಂಪನಿಗಳು ಅಡ್ಡ ದಾರಿ ಹಿಡಿದಿವೆ. ಲಂಚದ ಆಸೆಗೆ ಬಿದ್ದು ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿಗಳು ಭಾರೀ ಅಕ್ರಮಕ್ಕೆ ಮುಂದಾಗಿದ್ದಾರೆ ಎಂಬುದು ಲೋಕೇಶ್ ರಾಮ್ ಅವರ ಆರೋಪ.

ಈ ನಡುವೆ, HSRPಯನ್ನು ವಾಹನ ತಯಾರಿಕಾ ಸಂಸ್ಥೆಗಳು ಅಥವಾ ನಿರ್ದಿಷ್ಟ ಡೀಲರುಗಳೇ ವಿತರಿಸಬೇಕೆಂಬ ನಿಯಮ ಜಾರಿಗೆ ಬಂದರೆ ಅದು ಕೂಡಾ ಕಾನೂನು ಬಾಹಿರ. ಇದರಿಂದಾಗಿ ಸಾರ್ವಜನಿಕರು ತೊಂದರೆಗೊಳಗಾಗುತ್ತಾರೆ. ಹಾಗೂ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ ಎಂಬ ಆತಂಕವನ್ನು ಲೋಕೇಶ್ ರಾಮ್ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಸುಮಾರು 20 ಸಾವಿರ ಮಂದಿ ಜೀವನೋಪಾಯಕ್ಕಾಗಿ ವಾಹನಗಳ ನಂಬರ್ ಪ್ಲೇಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದೀಗ ವಾಹನ ತಯಾರಕರು ಹಾಗೂ ಡೀಲರುಗಳೇ HSRP ನಂಬರ್ ಪ್ಲೇಟ್ ವಿತರಿಸಬೇಕೆಂಬ ನಿಯಮ ಜಾರಿಯಾದಲ್ಲಿ ಈ 20 ಸಾವಿರ ಕುಟುಂಬಗಳೂ ಬೀದಿಗೆ ಬೀಳಬಹುದು ಎಂಬುದು ಅವರ ದೂರದೃಷ್ಟಿಯ ಪ್ರತಿಪಾದನೆ. ಅಷ್ಟೇ ಅಲ್ಲ, ವಾಹನ ತಯಾರಕರು-ವಿತರಕರಷ್ಟೇ HSRP ಪೂರೈಸುವ ನಿಯಮ ಜಾರಿಯಾಗಿದ್ದೇ ಆದಲ್ಲಿ ಅಂತಹಾ ವಾಹನ ಮಾಲೀಕರು ಬದಲಿ HSRPಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ 500 ರೂಪಾಯಿಯ HSRP ಖರೀದಿಸಲು ಸಾವಿರಾರು ರೂಪಾಯಿ ಖರ್ಚುಮಾಡಬೇಕೆ ಎಂಬ ಪ್ರಶ್ನೆ ಮೂಡಿದೆ. ಒಂದೊಮ್ಮೆ ವಿತರಕರು ತಮ್ಮ ಸಂಸ್ಥೆಯನ್ನು ಮುಚ್ಚಿದ್ದರೆ ವಾಹನ ಮಾಲೀಕರಿಗೆ ಪರ್ಯಾಯ ಮಾರ್ಗ ಇಲ್ಲದಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.

2001ರಲ್ಲೇ ಈ ಸುರಕ್ಷಾ ಕ್ರಮ ಜಾರಿ ಬಗ್ಗೆ ಚಿಂತನೆ ನಡೆದಿತ್ತು. ಕಳೆದೊಂದು ದಶಕದಲ್ಲಿ ಈ ಯೋಜನೆ ಜಾರಿಯ ಪ್ರಕ್ರಿಯೆ ನಡೆಯಿತಾದರೂ, ಅಕ್ರಮದ ಆರೋಪ ಹಿನ್ನಲೆಯಲ್ಲಿ ಕಾನೂನು ಹೋರಾಟ ಹಾಗೂ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಈ ನಡುವೆ ವರ್ಷದ ಹಿಂದಷ್ಟೇ, ತಪ್ಪುಗಳನ್ನು ಸರಿಪಡಿಸುವುದಾಗಿ ಸರ್ಕಾರವು ಹೈಕೋರ್ಟಿಗೆ ತಿಳಿಸಿದೆ. ಆದರೆ, ಪ್ರಭಾವಿಗಳ ಗುಂಪು ನಿಗೂಢವಾಗಿ ತಂತ್ರಗಾರಿಕೆ ಮೂಲಕ ಯೋಜನೆಯನ್ನು ಕಬಳಿಸಲು ಪ್ರಯತ್ನವನ್ನು ಮುಂದುವರಿಸಿದೆ ಎಂದು ಅವರು ಈ ದೂರಿನ ಮೂಲಕ ನೂತನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಸೆಳೆದಿದ್ದಾರೆ.

ಸ್ಪೀಡ್ ಗವರ್ನರ್, ಸುರಕ್ಷಾ ಗ್ಲಾಸ್, ಇಂಧನ ಟ್ಯಾಂಕ್, ಟೈರ್ ರೀತಿಯಲ್ಲೇ HSRP ಕೂಡಾ ವಾಹನಗಳ ಸುರಕ್ಷಾ ಸಾಧನ. ಹೀಗಿರುವಾಗ ಇದನ್ನು ಪೂರೈಸುವ ಅವಕಾಶ ಕೆಲವೇ ಕಂಪನಿಗಳಿಗಷ್ಟೇ ಸೀಮಿತಗೊಳಿಸುವ ಕ್ರಮ ಸರಿಯಾದುದಲ್ಲ. ಎಲ್ಲಾ ಅನುಮೋದಿತ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ನೀಡುವ ಅವಕಾಶ ಸಿಗಬೇಕಿದೆ. ಒಂದು ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಒಳ ಒಪ್ಪಂದ ಮಾಡಿ ನಿರ್ದಿಷ್ಟ ಕಂಪೆನಿಗಳಿಗಷ್ಟೇ HSRP ಪೂರೈಸುವ ಅವಕಾಶ ನೀಡಿದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸಾಧನವನ್ನು ಖರೀದಿಸುವ ಗ್ರಾಹಕನ ಆಯ್ಕೆ ಸ್ವಾತಂತ್ರವನ್ನೂ ಮೊಟಕುಗೊಳಿಸಿದಂತಾಗುತ್ತದೆ ಎಂದಿರುವ ಲೋಕೇಶ್ ರಾಮ್, ಈ ಸಂಬಂಧ ಭ್ರಷ್ಟಾಚಾರ ಮುಕ್ತವಾಗಿ ಯೋಜನೆ ಜಾರಿಯಾಗಬೇಕು, ಎಲ್ಲಾ ಅನುಮೋದಿತ ಕಂಪನಿಗಳ HSRP ವಿತರಣೆಗೆ ರಾಜ್ಯದಲ್ಲಿ ಅವಕಾಶ ಸಿಗಬೇಕು, ಜನಸ್ನೇಹಿ ವ್ಯವಸ್ಥೆಯಲ್ಲಿ ಸ್ವಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ಸಿಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.