ಮೈಸೂರು(Mysuru): ರೈತರನ್ನು ಆಕರ್ಷಿಸಿ ಮೋಸಗೊಳಿಸುವ ತಂತ್ರಜ್ಞಾನದ ಸಾಮಾಜಿಕ ಜಾಲತಾಣದ ಬಗ್ಗೆ ರೈತರು ಎಚ್ಚರಿಕೆಯಿಂದ ನಿಗಾವಹಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಲಹೆ ನೀಡಿದರು.
ಕೃಷಿ ಯಂತ್ರೋಪಕರಣಗಳು ಬಳಕೆ ಮೇಲುಸ್ತುವಾರಿ ಕೀಟನಾಶಕ ಬಳಕೆ ಬಗ್ಗೆ ಕುರುಬೂರಿನಲ್ಲಿ ಆಯೋಜಿಸಿದ್ಧ ಕಾರ್ಯಗಾರವನ್ನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ ಜಯಶ್ರೀ ಉದ್ಘಾಟಿಸಿ ಮಾತನಾಡಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಕೃಷಿ ಯಂತ್ರೋಪಕರಣಗಳ ಮೇಲುಸ್ತುವಾರಿ, ಕೀಟನಾಶಕ ಬಳಕೆಯ ಬಗ್ಗೆ ಸಮರ್ಪಕ ಜ್ಞಾನವಿಲ್ಲದ ಕಾರಣ ರೈತನ ಶ್ರಮ ಹಾಗೂ ಖರ್ಚು ಹೆಚ್ಚಳವಾಗುತ್ತಿದೆ, ಟ್ಯಾಕ್ಟರ್ ಟಿಲ್ಲರ್ ಗಳ ಸಣ್ಣ ರಿಪೇರಿಗೂ ರೈತರು ದಿನಗಟ್ಟಲೆ ಕೆಲಸ ಬಿಟ್ಟು ರಿಪೇರಿಗಾಗಿ ಕಾಯುವಂತಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ರೈತಮಿತ್ರ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ರೈತನ ವ್ಯವಸಾಯ ಚಟುವಟಿಕೆ ಬದಲಾಗಿದೆ. ಉತ್ಪಾದನೆ ಏರಿಕೆಯಾಗಿದೆ. ಆದರೆ ಉತ್ಪನ್ನಗಳಿಗೆ ಬೆಲೆ ಮಾತ್ರ ನ್ಯಾಯವಾಗಿ ಏರಿಕೆಯಾಗಿಲ್ಲ. ಅದಕ್ಕಾಗಿ ರೈತ ನಷ್ಟ ಅನುಭವಿಸುತ್ತಿದ್ದಾನೆ. ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತದೆ. ಆದರೆ ಯೋಜನೆಗಳು ರೈತರ ತಳ ಮಟ್ಟಕ್ಕೆ ಮುಟ್ಟುವಲ್ಲಿ ಕಾಣೆಯಾಗುತ್ತದೆ ಇಂತಹ ನೀತಿ ಗಳಿಂದಲೂ ರೈತ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೃಷಿಕ್ಷೇತ್ರವನ್ನು ಬಂಡವಾಳಶಾಹಿಗಳು ಕಂಪನಿಗಳು ಕಬಳಿಸಲು ಸಂಚು ನಡೆಸುತ್ತಿವೆ ರೈತರು ಜಾಗೃತರಾಗಿ ಸಂಘಟಿತರಾಗಿ ಮುಂದಿನ ಪೀಳಿಗೆಗಾಗಿ ಕೃಷಿ ಉಳಿಸಲು ಸಂಘಟನೆಗಳನ್ನು ಕಟ್ಟಿಕೊಳ್ಳಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಚಾರಗಳ ಬಗ್ಗೆ ನಂಬಿಕೆ ಇಟ್ಟುಕೊಳ್ಳಬೇಡಿ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಆಕರ್ಷಕ ಮಾಹಿತಿ ನೀಡುತ್ತಾರೆ. ಹೀಗಾಗಿ ಎಚ್ಚರಿಕೆಯಿಂದ ಗಮನಹರಿಸಬೇಕು ಇಲ್ಲದಿದ್ದರೆ ರೈತರು ಮೋಸ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಗಾರದಲ್ಲಿ ಕುರುಬೂರು ಸಿದ್ದೇಶ್, ರೈತಮಿತ್ರ ಸಂಸ್ಥೆಯ ನಿರ್ದೇಶಕನಾಗರಾಜಮೂರ್ತಿ, ಮಹೇಶ್, ಗೌರಿಶಂಕರ, ಹಿರಿಯ ರೈತ ಮುಖಂಡ ಕೆ ಜಿ ನಾಗರಾಜು, ಮತ್ತಿತರರು ಉಪಸ್ಥಿತರಿದ್ದರು.