ಮನೆ ರಾಜ್ಯ ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್ ಗೂ ವಿಮಾನ: ಎಂ.ಬಿ.ಪಾಟೀಲ

ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್ ಗೂ ವಿಮಾನ: ಎಂ.ಬಿ.ಪಾಟೀಲ

0

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 31ರಿಂದ ತನ್ನ‌ ಕಾರ್ಯಾಚರಣೆ ಆರಂಭಿಸಲಿದ್ದು ಅಂದು‌ ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಗಲಿದೆ. ಈ ಮುಂಚೆ ಆಗಸ್ಟ್ 11ರಿಂದ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದ 31ಕ್ಕೆ ಹೋಗಿದ್ದು ಇಂಡಿಗೊ‌ ಏರ್ ಲೈನ್ಸ್ ತನ್ನ ಬುಕ್ಕಿಂಗ್ ಅನ್ನು ಆರಂಭಿಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

Join Our Whatsapp Group

ತಿರುಪತಿಗೂ ಸಂಪರ್ಕ:
ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ಈ ರಹದಾರಿಗಳಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯ ವಿಮಾನ ಸಂಚಾರ ಮಾತ್ರ ಇರುತ್ತದೆ. ರಾತ್ರಿ ವೇಳೆ ಲ್ಯಾಂಡಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಮುಗಿಯಲಿದೆ ಎಂದು ಅವರು ವಿವರಿಸಿದ್ದಾರೆ.
ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ವಿಮಾನಯಾನ ಸಂಸ್ಥೆಗಳೂ ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಸಿಕ್ಕ ನಂತರ ಅವೂ ಕಾರ್ಯಾಚರಣೆ ನಡೆಸಲಿವೆ ಎಂದರು.