ಬೆಂಗಳೂರು: ‘ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ’ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ಲಲಿತಾ ಕುಮಾರಿ ಕೇಸ್ ನ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಮಾರ್ಗಸೂಚಿ, ಸುತ್ತೋಲೆ ಹೊರಡಿಸಲು ಡಿಜಿ ಮತ್ತು ಐಜಿಪಿಗೆ ಸೂಚನೆ ನೀಡಲಾಗಿದೆ.ಲಲಿತಾ ಕುಮಾರಿ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಆಂಗ್ಲ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್ಐಆರ್ ದಾಖಲಿಸಲು ವಿಳಂಬ ಮಾಡದಂತೆ ತಾಕೀತು ಮಾಡಲಾಗಿದೆ.ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ಅಗತ್ಯವಿಲ್ಲ. ಅದೇ ರೀತಿಯಾಗಿ ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನದೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್ಐಆರ್ ದಾಖಲಿಸಬೇಕು. ಪೊಲೀಸ್ ಠಾಣೆಯ ಡೈರಿಯಲ್ಲಿ ತನಿಖೆಯ ಮಾಹಿತಿ ಉಲ್ಲೇಖಿಸಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಲಲಿತಾ ಕುಮಾರಿ ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕಿಯಾಗಿದ್ದು, ಆಕೆಯ ತಂದೆ ಭೋಲಾ ಕಾಮತ್ ಅವರು ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದರು.ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗಳಿಗೆ ಲಿಖಿತ ವರದಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ವಿಷಯ ಪೊಲೀಸ್ ವರಿಷ್ಠಾಧಿಕಾರಿಗೆ ತಲುಪಿದ ನಂತರವೇ ಎಫ್ಐಆರ್ ದಾಖಲಿಸಲಾಗಿದೆ. ಇದನ್ನು ಗಮನಿಸಿರುವ ಕೋರ್ಟ್ ಈ ಆದೇಶ ನೀಡಿದೆ.














