ಮನೆ ಅಪರಾಧ ರೌಡಿಶೀಟರ್ ಸಿದ್ದಾಪುರ ಮಹೇಶ್​ ಕೊಲೆ ಪ್ರಕರಣ: 11 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ

ರೌಡಿಶೀಟರ್ ಸಿದ್ದಾಪುರ ಮಹೇಶ್​ ಕೊಲೆ ಪ್ರಕರಣ: 11 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ

0

ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್​ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು 11 ಮಂದಿ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಸಿದ್ದಾಪುರ ಸುನೀಲ್,‌ ಕಣ್ಣನ್, ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್​​​ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ ಸೇರಿದಂತೆ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆ. 4ರಂದು ಪರಪ್ಪನ ಅಗ್ರಹಾರ ಜೈಲಿನ ಸಮೀಪ ರೌಡಿ ಶೀಟರ್ ಮಹೇಶ್​ ಕೊಲೆ ನಡೆದಿತ್ತು. ಕೊಲೆ ನಡೆದ 48 ಗಂಟೆಯೊಳಗ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆ ಮಾಡಿ ಹೊಸೂರಿನ ಬಳಿ ಅಡಗಿ ಕುಳಿತಿದ್ದ ಆರೋಪಿಗಳು ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ಪತ್ತೆಗಾಗಿ ಡಿಸಿಪಿ ಸಿ.ಕೆ ಬಾಬಾ ವಿಶೇಷ ತಂಡಗಳನ್ನ ರಚನೆ ಮಾಡಿದ್ದರು. ಇಂದು ಪರಪ್ಪನ ಅಗ್ರಹಾರ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಶಿಷ್ಯಂದಿರಾಗಿದ್ದಾರೆ. ಈ ಹಿಂದೆ ಹಾಸನದಲ್ಲಿ ನಡೆದಿದ್ದ ಮಹೇಶ ಗುರು ಶಾಂತಿನಗರ ಲಿಂಗನ ಕೊಲೆ ಕೇಸ್ ​ನಲ್ಲಿದ್ದ ಬಹುತೇಕ ಆರೋಪಿಗಳು ಈ ಕೇಸ್ ​ನಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನಲೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್‌ ಸಿದ್ದಾಪುರ ಮಹೇಶ್​ ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಶುಕ್ರವಾರ (ಆ.4) ಬಿಡುಗಡೆಯಾಗಿ ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.