ಮನೆ ಅಪರಾಧ ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ: ಆರೋಪಿಗಳ ಬಂಧನ

ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ: ಆರೋಪಿಗಳ ಬಂಧನ

0

ಚಿಕ್ಕಮಗಳೂರು: ಪ್ರಿಯಕರನ ಜೊತೆ ಪತ್ನಿಯೇ ಸೇರಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ನವೀನ್ (28) ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ.

ಕಡೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತರು.

ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪಾವನಳ ಪತಿ ನವೀನ್‌ ಕುಮಾರ್ ಆಗಸ್ಟ್​ ೬ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಮೃತದೇಹ ಪತ್ತೆಯಾದ ಹಿನ್ನೆಲೆಯನ್ನು ಗಮನಿಸಿ ನವೀನ್‌ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಳಿಕ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಕ್ರಮ ಸಂಬಂಧದ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಸಿಪಿಐ ಶಿವಕುಮಾರ್ ಮತ್ತು ಪಿಎಸೈ ರಂಗನಾಥ್ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸಿ ವಾರದೊಳಗೆ ಕೊಲೆಯ ಪ್ರಕರಣದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ೬ ವರ್ಷಗಳ ಹಿಂದೆ ನವೀನ್‌ ಕುಮಾರ್ ಜೊತೆ ಪಾವನ ಮದುವೆಯಾಗಿ ೪ ವರ್ಷದ ಹೆಣ್ಣು ಮಗುವಿದೆ. ಆದರೆ ಪತ್ನಿ ಪಾವನ ಮತ್ತು ಪ್ರಿಯಕರ ಸಂಜು ಕಳೆದ ೧೩ ವರ್ಷಗಳಿಂದ ಪ್ರೀತಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ತಮ್ಮ ಪ್ರೀತಿಗೆ ಗಂಡ ನವೀನ್ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆಗೂಡಿ ನಿದ್ದೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಚಪಾತಿ ಹಿಟ್ಟಿಗೆ ಬೆರೆಸಿ ಊಟದ ಬಳಿಕ ನಿದ್ದೆ ಮಂಪರಿಗೆ ಜಾರಿದ ಬಳಿಕ ಪತಿಯನ್ನು ಪ್ರಿಯಕರನ ಬೈಕಿನಲ್ಲಿ ತಂದು ಯಗಟಿ ಸಮೀಪದ ಕೆರೆಯ ದೊಡ್ಡಗುಂಡಿಗೆ ಎಸೆದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ.

ಮೃತ ನವೀನ್‌ ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ತನಿಖೆಯ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.