ಮನೆ ರಾಷ್ಟ್ರೀಯ ‘ದಿಗ್ವಿಜಯ’ ಚಾನೆಲ್ ಅರ್ನಬ್ ಗೋಸ್ವಾಮಿ ತೆಕ್ಕೆಗೆ

‘ದಿಗ್ವಿಜಯ’ ಚಾನೆಲ್ ಅರ್ನಬ್ ಗೋಸ್ವಾಮಿ ತೆಕ್ಕೆಗೆ

0

ಬೆಂಗಳೂರು: ವಿಜಯ ಸಂಕೇಶ್ವರ ಮಾಲೀಕತ್ವದ ವಿ.ಆರ್.ಎಲ್. ಸಂಸ್ಥೆಯ ‘ದಿಗ್ವಿಜಯ’ ಸುದ್ದಿ ವಾಹಿನಿಯನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ವಾಹಿನಿ ಖರೀದಿಸಿದೆ.

ರಾಷ್ಟ್ರಮಟ್ಟದಲ್ಲಿ ಸತತ 5 ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿರುವ ರಿಪಬ್ಲಿಕ್ ವಾಹಿನಿಯೊಂದಿಗೆ ದಿಗ್ವಿಜಯ ಟಿವಿ ಚಾನಲ್ ವಿಲೀನ ಮಾಡಲಾಗಿದೆ. ಕೆಲವು ತಿಂಗಳ ಕಾಲ ದಿಗ್ವಿಜಯ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರೆಯಲಿದ್ದು, ನಂತರ ‘ರಿಪಬ್ಲಿಕ್ ಕನ್ನಡ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ.

ಕಳೆದ ವಾರವೇ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ದಿಗ್ವಿಜಯ ವಾಹಿನಿಯ ಸ್ಟುಡಿಯೋದಿಂದಲೇ ರಿಪಬ್ಲಿಕ್ ಟಿವಿಯ ರಾತ್ರಿ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

2017ರಲ್ಲಿ ವಿ.ಆರ್.ಎಲ್. ಸಂಸ್ಥೆಯಿಂದ ದಿಗ್ವಿಜಯ ಟಿವಿ ಚಾನೆಲ್ ಆರಂಭಿಸಲಾಗಿತ್ತು. ಇದೇ ವರ್ಷ ಅರ್ನಬ್ ಗೋಸ್ವಾಮಿ ಆರಂಭಿಸಿದ್ದ ರಿಪಬ್ಲಿಕ್ ವಾಹಿನಿ ಮೊದಲ ವಾರದಿಂದಲೇ ಟಿ.ಆರ್.ಪಿ. ಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವರ್ಲ್ಡ್, ರಿಪಬ್ಲಿಕ್ ಬಾಂಗ್ಲಾ ಚಾನೆಲ್ ಮೂಲಕ ಹಿಂದಿ, ಇಂಗ್ಲಿಷ್, ಬಂಗಾಳಿ ಭಾಷೆಯಲ್ಲಿ ರಿಪಬ್ಲಿಕ್ ವಾಹಿನಿ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಕನ್ನಡದಲ್ಲಿಯೂ ರಿಪಬ್ಲಿಕ್ ವಾಹಿನಿ ಕಾರ್ಯನಿರ್ವಹಿಸಲಿದೆ.