ಮನೆ ರಾಜ್ಯ ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಡಾ. ಹೆಚ್  ಸಿ ಮಹದೇವಪ್ಪ

ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಡಾ. ಹೆಚ್  ಸಿ ಮಹದೇವಪ್ಪ

0

ಮೈಸೂರು: ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ. ಶೇಕಡಾ 33 ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ ರಾಜ್ಯದಲ್ಲಿ ಶೇಕಡಾ 21 ರಷ್ಟು ಮಾತ್ರ ಇದೆ. ಆದ್ದರಿಂದ ಪ್ರತಿಯೊಬ್ಬರು ಕಾಡನ್ನು ಹಾಗೂ ಕಾಡು ಪ್ರಾಣಿಗಳನ್ನು ಉಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್  ಸಿ ಮಹದೇವಪ್ಪ ತಿಳಿಸಿದರು.

ದಸರಾ ಗಜ ಪಯಣಕ್ಕೆ ವೀರನ ಹೊಸಹಳ್ಳಿ ಬಳಿ ಅವರು ಚಾಲನೆ ನೀಡಿ ಮಾತನಾಡಿ, ಯಾವುದೇ ಜಾತಿ ಧರ್ಮ ಭೇದ ಮಾಡದೇ ಸಮ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ತಿಳಿಸಿದರು.

ವಿಶ್ವ ವಿಖ್ಯಾತ ದಸರಾ ಆಚರಣೆಯ ಹಿನ್ನೆಲೆ ಯಲ್ಲಿ ದಸರಾ ಗಜ ಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮಾಡಲಾಗಿದೆ. ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ ಆದ್ದರಿಂದ ಇದು ವಿಶ್ವ ವಿಖ್ಯಾತಿ ಯನ್ನು ಪಡೆದಿದೆ. ಸ್ವಾತಂತ್ಯ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಅನೆ ಮೇಲೆ 800 ಕೆಜಿ ತೂಕದ ಅಂಭಾರಿಯನ್ನು ಮೆರವಣಿಗೆ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಇಡೀ ದೇಶದ 140 ಕೋಟಿ ಜನರು ಎಲ್ಲರೂ ಒಂದೇ ಎಂಬ ಸಂದೇಶವನ್ನು ಬಿಂಬಿಸಲಾಗುತ್ತದೆ ಎಂದರು.

ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ  ಅವರು ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿ ಗಜ ಪಯಣ ದಸರಾ ಮಹೋತ್ಸವದ ಆರಂಭ. ನಾವು ಯಾವುದೇ ಶುಭ ಕಾರ್ಯ ಮಾಡಲು ಗಣಪತಿ ಯನ್ನು ಪೂಜಿಸುತ್ತೇವೆ.  ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆಪ್ಟಂಬರ್ 05 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದರು.

ಈ ಹಿಂದೆ ದಸರಾ ಗೆ ಆನೆಗಳನ್ನು ಕಾಲು ನಡಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ದಾರಿಯುದ್ದಕ್ಕೂ ಜನರು ಆನೆಗಳಿಗೆ ಮವುತರಿಗೆ ಪೂಜೆ ಮಾಡಿ ಆಹಾರ ನೀಡಿ ಮುಂದೆ ಕಳುಹಿಸುತ್ತಿದ್ದರು.  ಆದರೆ ಇತ್ತೀಚೆಗೆ ಲಾರಿ ಮೂಲಕ ಕರೆದುಕೊಂಡು ಹೋಗಲಾಗುತ್ತದೆ.  ಪ್ರಕೃತಿ ಪರಿಸರವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳ ಆಗಿ ಹವಮಾನ ವೈಪರೀತ್ಯ ಉಂಟಾಗುತ್ತದೆ. ಓಜೋನ್ ಪದರ ತೆಳುವಾಗುತ್ತಿದೆ. ಕರೋನಾ ಸಂಧರ್ಭದಲ್ಲಿ ಆಮ್ಲಜನಕ ಸಿಗದೆ ಹಲವಾರು ಜನ ಸಾವನ್ನು ಅಪ್ಪಿದರು ಆದ್ದರಿಂದ ಪರಿಸರ ಉಳಿಸಿ ಬೆಳಸಬೇಕು ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮಹಾ ಪೌರರಾದ  ಶಿವಕುಮಾರ್ ಅವರು ಮಾತನಾಡಿ ಮೈಸೂರಿನ ಅರಸರು ದಸರಾ ಆಚರಣೆಯನ್ನು ಜಾರಿಗೆ ತಂದರು. 100 ವರ್ಷಗಳ ಹಿಂದೆಯೇ ಮೈಸೂರು ನಗರ ವಿದ್ಯುತ್ ಛಕ್ತಿ ಯನ್ನು ಪಡೆಯಿತು. ರಾಜರು ಉತ್ತಮ ನಗರವನ್ನು ನಿರ್ಮಾಣ ಮಾಡಿದರು. ಉತ್ತಮ ರಸ್ತೆ ನಿರ್ಮಾಣ ಮಾಡಿದರು. ಮೈಸೂರು ಬೆಳವಣಿಗೆಗೆ ಮೈಸೂರು ರಾಜರ ಕೊಡುಗೆಯನ್ನು ನಾವೆಲ್ಲರೂ ನೆನೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ, ಗಜ ಪಯಣ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಈ ಭಾರಿ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದ್ದಾರೆ. ದಸರಾ ಆಚರಣೆಯ ಪ್ರಮುಖ ಆಕರ್ಷಣೆ ಜಂಭೂಸವಾರಿ. ಇದನ್ನು ನೋಡಲು ವಿಶ್ವದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ ಎಂದರು.

ಹುಣಸೂರು ತಾಲ್ಲೂಕು ಕಾಡಿನ ಗಡಿಯನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಮಾನ್ಯ ಅರಣ್ಯ ಸಚಿವರಲ್ಲಿ ಮನವಿ ಮಾಡಿದಾಗ 5 ಕೋಟಿ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ ಅವರು ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಾರೆ ಇವರಿಗೆ ಸಕಾಲದಲ್ಲಿ ಸಂಬಳ ನೀಡಬೇಕು. ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲ. ಇವರನ್ನು ಖಾಯಂ ಮಾಡಿ ಸೇವಾ ಭದ್ರತೆ ನೀಡಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಮಾವುತರಿಗೆ ಗಣ್ಯರಿಂದ  ಸನ್ಮಾನ ಮಾಡಿಸಿ ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವ ಕುಮಾರ್,  ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾ, ಡಿ ಸಿ ಫ್ ಸೌರಭ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.