ಮೈಸೂರು(Mysuru): ಮೈಸೂರು ನಿರ್ಮಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಹಿರಿಯ ಅಭಿಯಂತರರು ಮಂಜುನಾಥ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 5000 ರೂ. ದಂಡ ವಿಧಿಸಿ ಆದೇಶಿಸಿದೆ .
ಮೈಸೂರು ತಾಲೂಕು ಸರ್ಕಾರಿ ಉತ್ತನಹಳ್ಳಿ ಗ್ರಾಮದ ರವೀಂದ್ರ ಎಂಬುವವರು“ ಮೈಸೂರು ತಾಲೂಕು ಹೊಸಹುಂಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಉತ್ತನಹಳ್ಳಿಯ ವೀರಶೈವ ಬೀದಿಯಲ್ಲಿ ನಿರ್ಮಾಣವಾಗಿರುವ ಬಸವೇಶ್ವರ ಸಮುದಾಯ ಭವನವು ಮೈಸೂರು ನಿರ್ಮಿತಿ ಕೇಂದ್ರದಿಂದ ಇತ್ತೀಚೆಗಷ್ಟೇ ನಿರ್ಮಿಸಲ್ಪಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳ ದೃಢೀಕೃತ ಪ್ರತಿ “ ಒದಗಿಸುವಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ ಸದರಿ ವೀರಶೈವ ಸಮುದಾಯ ಭವನವು ,ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದ್ದು / ಅಕ್ರಮ ಕಾಮಗಾರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಮಾಹಿತಿಯನ್ನು ಅಧಿಕಾರಿಗಳು ನೀಡಿರಲಿಲ್ಲ.
ಇದನ್ನು ಪ್ರಶ್ನಿಸಿ ರವೀಂದ್ರ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ದಿನಾಂಕ 18/03/2022 ರಂದು ಆನ್ ಲೈನ್ ಮೂಲಕ ಮಾಹಿತಿ ಆಯೋಗದಲ್ಲಿ ನಡೆದ ಮೇಲ್ಮನವಿ ವಿಚಾರಣೆಯಲ್ಲಿ ರವೀಂದ್ರರವರ ಮೇಲ್ಮನವಿಯನ್ನು ಅಂಗೀಕರಿಸಿ ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ, ಅಪೂರ್ಣ ಮಾಹಿತಿಯನ್ನು ನೀಡಿರುವ ಬಗ್ಗೆ ಮೇಲ್ಮನವಿದಾರರ ವಿವರಣೆ ಪಡೆದುಕೊಂಡು ಉಚಿತವಾಗಿ ಮಾಹಿತಿ ನೀಡುವಂತೆ ಹಾಗೂ ಮೈಸೂರು ನಿರ್ಮಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಹಿರಿಯ ಅಭಿಯಂತರರು ಮಂಜುನಾಥ ಅವರಿಗೆ 5000 ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ .