ಮನೆ ರಾಷ್ಟ್ರೀಯ ಸಂವಿಧಾನದ ಹೊಸ ಪ್ರತಿಗಳ ಮುನ್ನುಡಿಯಲ್ಲಿ “ಜಾತ್ಯತೀತ”, “ಸಮಾಜವಾದಿ” ಪದಗಳು ಕಣ್ಮರೆ: ಅಧೀರ್ ರಂಜನ್ ಚೌಧರಿ ಆರೋಪ

ಸಂವಿಧಾನದ ಹೊಸ ಪ್ರತಿಗಳ ಮುನ್ನುಡಿಯಲ್ಲಿ “ಜಾತ್ಯತೀತ”, “ಸಮಾಜವಾದಿ” ಪದಗಳು ಕಣ್ಮರೆ: ಅಧೀರ್ ರಂಜನ್ ಚೌಧರಿ ಆರೋಪ

0

ನವದೆಹಲಿ: ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಶಾಸಕರಿಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳ ಮುನ್ನುಡಿಯಲ್ಲಿ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳು ಕಣ್ಮರೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಚೌಧರಿ ಇಂದು ನಾವು ನೂತನ ಸಂಸತ್ ಭವನದಲ್ಲಿ ನೀಡಿದ್ದ ಸಂವಿಧಾನದ ಮುನ್ನುಡಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳಿಲ್ಲ, ಈ ಎರಡು ಪದಗಳು ಸಂವಿಧಾನದಲ್ಲಿ ಇಲ್ಲದಿದ್ದಲ್ಲಿ ಅದು ಆತಂಕಕಾರಿ ಸಂಗತಿಯಾಗಿದೆ. ಸರ್ಕಾರವು ಈ ಬದಲಾವಣೆಯನ್ನು ಅತ್ಯಂತ “ಬುದ್ಧಿವಂತಿಕೆಯಿಂದ” ಮಾಡಿದೆ ಮತ್ತು ಅವರ ಉದ್ದೇಶಗಳು “ಸಮಸ್ಯೆ”ಉಂಟುಮಾಡುವಂತದ್ದಾಗಿದೆ ಎಂದ ಅವರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ ಎಂದು ಚೌಧರಿ ಹೇಳಿದ್ದಾರೆ.

ಮಂಗಳವಾರ ಮುಂಜಾನೆ, ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ವೇಳೆ ಈ ವಿಚಾರ ಗಮನಕ್ಕೆ ಬಂದಿದ್ದು ಅಲ್ಲದೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ, “ಪೀಠಿಕೆಯಲ್ಲಿ ‘ಸಮಾಜವಾದಿ ಮತ್ತು ಜಾತ್ಯತೀತ’ ಪದಗಳು ಇರಲಿಲ್ಲ” ಎಂದು ಹೇಳಿದರು.

ಮಂಗಳವಾರ ನೂತನ ಸಂಸತ್ ಭವನದ ಉದ್ಘಾಟನೆಯ ದಿನದಂದು ಸಂಸತ್ತಿನ ಸದಸ್ಯರು ಭಾರತದ ಸಂವಿಧಾನದ ಪ್ರತಿ, ಸಂಸತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನು ಸ್ವೀಕರಿಸಿದ್ದರು.

ನೂತನ ಸಂಸತ್ ಸಂಕೀರ್ಣವನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಎರಡನೇ ದಿನದ ವಿಶೇಷ ಸಂಸತ್ ಅಧಿವೇಶನ ಮಂಗಳವಾರ ಹೊಸ ಕಟ್ಟಡದಲ್ಲಿ ನಡೆಯಿತು.