ಮನೆ ರಾಜ್ಯ ಎಲ್ಲರ ಏಳಿಗೆ ಬಯಸುವ ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠ: ಈಶ್ವರ ಖಂಡ್ರೆ

ಎಲ್ಲರ ಏಳಿಗೆ ಬಯಸುವ ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠ: ಈಶ್ವರ ಖಂಡ್ರೆ

0

ಬೆಂಗಳೂರು: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವಾದಿ ಪ್ರಮಥರ ಸತ್ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸುತ್ತಾ, ಸರ್ವರ ಏಳಿಗೆಗೆ ಶ್ರಮಿಸುತ್ತಿರುವ ವೀರಶೈವ, ಲಿಂಗಾಯಿತ ಧರ್ಮ ಶ್ರೇಷ್ಠವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ 3ನೇ ವಾರ್ಷಿಕೋತ್ಸವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ  ವಿವಿಧ ನಾಗರಿಕ ಸೇವೆಗಳಿಗೆ ನೇಮಕಗೊಂಡ, ಪದೋನ್ನತಿ ಹೊಂದಿದ ಅಧಿಕಾರಿಗಳು, ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳಾಗಿ ನೇಮಕಗೊಂಡಿರುವ ಸಮುದಾಯದ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲ್ಲ, ಜಾತಿ, ಮತ, ಧರ್ಮದವರಿಗೆ ಅಕ್ಷರ, ಅನ್ನ, ಆಶ್ರಯ ನೀಡಿ ಜ್ಞಾನವಂತರನ್ನಾಗಿ ಮಾಡುತ್ತಿರುವ ಸಮಾಜದ ಮಠ ಮಾನ್ಯಗಳ ಕೊಡುಗೆ ಅಪಾರವಾದ್ದು ಎಂದು ಹೇಳಿದರು.

ಸಮಾಜ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಿ, ಭವ್ಯ ಪರಂಪರೆಯ ಸಮಾಜದಿಂದ ಬಂದಿರುವ ನೀವು ನಿಮಗೆ ದೊರೆತಿರುವ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ಚಲಾಯಿಸಿ, ರಾಜ್ಯದ ಅಭಿವೃದ್ಧಿಗೆ, ಬಡವರ ಕಲ್ಯಾಣಕ್ಕೆ ಶ್ರಮಿಸಿ ಎಂದು ಕರೆ ನೀಡಿದರು.

ವೀರಶೈವ ಲಿಂಗಾಯತ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ, ಅವರಲ್ಲಿ ಅದಮ್ಯ ಚೇತನ, ಉತ್ಸಾಹವಿದ್ದರೂ ಆರ್ಥಿಕ ಸಂಕಷ್ಟದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ನಮ್ಮ ಸಮುದಾಯದ ಅರ್ಹರು ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು, ಬೆಳಗಬೇಕು.  ಈ ನಿಟ್ಟಿನಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಯಶಸ್ಸು ಪಡೆಯಲು ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು.

ನಮ್ಮ ಸಮುದಾಯದಲ್ಲೂ ಬಡವರಿದ್ದಾರೆ, ನಿರ್ಗತಿಕರಿದ್ದಾರೆ ಹೀಗಾಗಿ ಸಮುದಾಯದ ಎಲ್ಲ ಜಾತಿ, ಉಪಜಾತಿಗಳನ್ನೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಇದಕ್ಕಾಗಿ ಪಕ್ಷಾತೀತವಾಗಿ ಸಮುದಾಯದ ಎಲ್ಲರೂ ಪ್ರಯತ್ನಿಸಬೇಕು ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಸರ್ಕಾರ ಬಡಜನರ, ಶೋಷಿತರ, ವಂಚಿತರ, ದಲಿತರ,  ನಿರ್ಗತಿಕರ ಉದ್ಧಾರಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಯೋಜನೆಗಳನ್ನು ಜನರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ  ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಕಾರ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿದರೆ, ಜನರ ಪ್ರೀತಿಗೆ ಪಾತ್ರರಾಗುತ್ತೀರಿ ಎಂದರು.

ಎಲ್ಲರಿಗಾಗಿ ಪ್ರತಿಯೊಬ್ಬರು, ಪ್ರತಿಯೊಬ್ಬರಿಗಾಗಿ ಎಲ್ಲರೂ ಎನ್ನುವ ಸಹಕಾರ ತತ್ವದ ಆಧಾರದ ಮೇಲೆ ನೀವು ಈ ಪತ್ತಿನ ಸಹಕಾರ ಸಂಘ ಕಟ್ಟಿದ್ದೀರಿ ಈ ಸಂಘ ಸಮುದಾಯದ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.

ನೀವು ನಿಮ್ಮ ಕರ್ತವ್ಯದಲ್ಲಿ ಶ್ರದ್ಧೆ ಪ್ರಾಮಾಣಿಕತೆ ಮೆರೆದರೆ, ರಾಜ್ಯ ಅಭಿವೃದ್ಧಿ ಸಾಧಿಸುತ್ತದೆ. ನೀವು ಸಮಾಜದ ಬಡಜನರ ಕೈಹಿಡಿದು ಮೇಲೆತ್ತಿದರೆ ಸಮಾಜದ ಅಭಿವೃದ್ಧಿ ಆಗುತ್ತದೆ. ನೀವೆಲ್ಲರೂ ಒಂದಾಗಿ, ಸಂಘಟಿತರಾಗಿ, ಸಮಾಜದ ಹೆಸರು ಉಳಿಸಿ, ಸಮಾಜದ ಕೀರ್ತಿ ಪತಾಕೆ ಉತ್ತುಂಗದಲ್ಲಿ ಹಾರಿಸಿ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಶರಣ ಪಾಟೀಲ್, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಸಿರಿಗೆರೆ ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.