ಮನೆ ಸುದ್ದಿ ಜಾಲ ಅ. 19 ರಂದು ಒಂದು ದಿನ ನ್ಯಾಯಬೆಲೆ ಅಂಗಡಿ ಬಂದ್

ಅ. 19 ರಂದು ಒಂದು ದಿನ ನ್ಯಾಯಬೆಲೆ ಅಂಗಡಿ ಬಂದ್

0

ಬೆಂಗಳೂರು:ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ  ನಮಗೆ ಕಮೀಷನ್ ಭಾಗ್ಯ ಕೋಡಿ ಎಂದು ಆಗ್ರಹಿಸಿ ಅಕ್ಟೋಬರ್ 19 ರಂದು ನ್ಯಾಯ ಬೆಲೆ ಅಂಗಡಿಗಳನ್ನು ಒಂದು ದಿನದ ಸಾಂಕೇತಕವಾಗಿ ಬಂದ್ ಮಾಡಲು ರಾಜ್ಯ ಪಡಿತರ ವಿತರಕರ ಸಂಘ  ನಿರ್ಧರಿಸಿದೆ.

Join Our Whatsapp Group

ಈ ಸಂಬಂಧ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತರಾದ ಕನಕವಲ್ಲಿ ಅವರಿಗೆ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್ ಹಣದಿಂದ ವಂಚಿತರಾಗುತ್ತಿದ್ದೇವೆ ಎಂದು ಬೆಂಗಳೂರು  ನಗರ ಸರ್ಕಾರಿ ಪಡಿತರ ವಿತರಕರ  ಸಂಘ ಪಡಿತರ ವಿತರಕರ ಸಂಘ ಅಧ್ಯಕ್ಷ ಜೆ ಬಿ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾದಪ್ಪ ಬಿ.ಪಿ ಮತ್ತು ಖಜಾಂಜಿ ರಾಮಯ್ಯ ರಾಜ್ಯ ಪಡಿತರ ವಿತರಕರ  ಸಂಘದ ರಾಜ್ಯಾಧ್ಯಕ್ಷ ಜಯಕುಮಾರ್ ಮನವಿಯಲ್ಲಿ  ಒತ್ತಾಯಿಸಿದ್ದಾರೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ನಮಗೆ ಅಹವಾಲಿಗೆ ಸ್ಪಂದನೆ ದೊರೆತಿಲ್ಲ. ಸೌಜನ್ಯಕ್ಕಾದರೂ ಸರ್ಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಪಡಿತರ ವಿತರಕರ ಬಗ್ಗೆ ಕಾಳಜಿವಹಿಸದಿರುವುದು ತುಂಬಾ ನೋವು ತಂದಿದೆ ಎಂದು ಹೇಳಿದ್ದಾರೆ.

5 ಕೆಜಿಯ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ನೀಡುವುದಕ್ಕೆ ನಮ್ಮ ಯಾವುದೇ ತರಕಾರು ಇಲ್ಲ. ಆದರೆ ತಾವು ಈಗಾಗಲೇ ಆಶ್ವಾಸನೆ ನೀಡಿರುವಂತೆ 5 ಕೆಜಿ ಅಕ್ಕಿಗೆ ಬದಲಾಗಿ 170 ರೂಪಾಯಿಗಳ ಹಣಕ್ಕೆ ನಮಗೆ ಬರಬೇಕಾದ 6.50 ರೂ ಕಮೀಷನ್ ಮೊತ್ತವನ್ನು ನಮಗೆ ಪಾವತಿಸಬೇಕು. ಹಗಲಿರುಳು ಕೆಲಸ ಮಾಡಿ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಗೊಳಿಸಿದ್ದೇವೆ. ಹೀಗಿದ್ದರೂ ನಮ್ಮನ್ನು ಕಡೆಗಣಿಸಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.

ಕಷ್ಟದಲ್ಲಿರುವ ನಮ್ಮ ವಿತರಕರು ಯಾವುದೇ ಕಾರಣಕ್ಕೂ ಹೊಸ ಆದೇಶದನ್ವಯ “ರಸೀದಿ ಪ್ರಿಂಟರ್ಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ಸರ್ಕಾರದಿಂದಲೇ ಒದಗಿಸಬೇಕು. ಬಾಕಿ ಇರುವ 4 ತಿಂಗಳುಗಳ ಕಮೀಷನ್ ಹಣ ಹಾಗೂ ವರ್ಷಗಳಿಂದ ಪಡಿತರ ವಿತರಕರಿಗೆ ಬರಬೇಕಿರುವ ಬಾಕಿ ಮೊತ್ತವನ್ನು ತಕ್ಷಣವೇ ಒದಗಿಸಬೇಕು. ಮನಸೋ ಇಚ್ಚೆ ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡಬಾರದು ಎಂದು ಹೇಳಿದ್ದಾರೆ.