ಮನೆ ಅಪರಾಧ ಸಂಬಂಧಿಕನಿಂದಲೇ ಮಾಂಗಲ್ಯ ಸರ ಅಪಹರಣ: ಆರೋಪಿ ಬಂಧನ

ಸಂಬಂಧಿಕನಿಂದಲೇ ಮಾಂಗಲ್ಯ ಸರ ಅಪಹರಣ: ಆರೋಪಿ ಬಂಧನ

0

ಭದ್ರಾವತಿ: ಕಡದಕಟ್ಟೆಯ ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಿಸಿದ ಪ್ರಕರಣವನ್ನು 24 ಗಂಟೆಯೊಳಗೆ ಪ್ರಕರಣ ಭೇದಿಸಿರುವ ಇಲ್ಲಿನ ನ್ಯೂಟೌನ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕುರುಬನಪುರ ಗ್ರಾಮದ ಕೆ.ಎನ್.ನಾಗರಾಜ (32) ಬಂಧಿತ. ಆತನಿಂದ 88 ಗ್ರಾಂ. ತೂಕದ ಸುಮಾರು ₹ 4.5 ಲಕ್ಷ ಮೌಲ್ಯದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಘಟನೆ ವಿವರ: ನ. 6ರಂದು ಬೆಳಿಗ್ಗೆ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಸಂಬಂಧಿಕರ ಮಗ (ಪತಿಯ ಅಣ್ಣನ ಮಗ) ಕೆ.ಎನ್.ನಾಗರಾಜ ಬಂದಿದ್ದನು. ಆತನು ತನ್ನ ಹತ್ತಿರ ಇದ್ದ ಟವೆಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬಿಗಿದು ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ.

ಈ ಕುರಿತು ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ.ಆರ್. ನಾಗರಾಜ್‌ ಅವರ ಮೇಲ್ವಿಚಾರಣೆಯಲ್ಲಿ, ನಗರ ಪೊಲೀಸ್ ಸಿಪಿಐ ಜೆ.ಶೈಲಕುಮಾರ ನೇತೃತ್ವದಲ್ಲಿ ಠಾಣಾಧಿಕಾರಿ ಟಿ.ರಮೇಶ್ ಮತ್ತು ಸಿಬ್ಬಂದಿ ನವೀನ್, ಮಲ್ಲಿಕಾರ್ಜುನ, ರಾಕೇಶ, ಗಿರೀಶ್ ಮತ್ತು ವಿನೋದ್‌ ಅವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.

ದೂರು ದಾಖಲಾದ 24 ಗಂಟೆಯೊಳಗಾಗಿ ಪ್ರಕರಣ ಭೇದಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದ್ದು, ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಪ್ರಶಂಸಿಸಿದೆ.