ಮನೆ ಸುದ್ದಿ ಜಾಲ ಐಟಿಐ ಕ್ರೀಡಾಂಗಣದಲ್ಲಿ ಇಂದಿನಿಂದ 10 ದಿನ ಜನಸ್ಪಂದನ ಕಾರ್ಯಕ್ರಮ

ಐಟಿಐ ಕ್ರೀಡಾಂಗಣದಲ್ಲಿ ಇಂದಿನಿಂದ 10 ದಿನ ಜನಸ್ಪಂದನ ಕಾರ್ಯಕ್ರಮ

0

ಬೆಂಗಳೂರು: ಬೆಂಗಳೂರು ನಗರದಲ್ಲಿ ಇಂದಿನಿಂದ (ಜನವರಿ 3) ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಸುಮಾರು 10 ದಿನ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇನ್ನೂ ಒಂದೇ ಸೂರಿನಡಿ ವಿವಿಧ ಇಲಾಖೆಗಳು ಭಾಗಿಯಾಗಲಿದ್ದು ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಆರ್‌ಸಿಎಲ್, ಬಿಎಂಆರ್​ಡಿಎ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖಾ ಅಧಿಕಾರಿಗಳು ಭಾಗಿ ಆಗಲಿದ್ದಾರೆ.

ಇಂದು ಬೆಳಗ್ಗೆ 9:30ಕ್ಕೆ ಐಟಿಐ ಕ್ರೀಡಾಂಗಣದಲ್ಲಿ ಕೆ.ಆರ್.ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಸಮಸ್ಯೆಯನ್ನು ಡಿಕೆ ಶಿವಕುಮಾರ್ ಅವರು ಆಲಿಸಲಿದ್ದಾರೆ. ಅಧಿಕಾರಿಗಳು ಸ್ಥಳದಲ್ಲೇ ಜನರ ಅಹವಾಲುಗಳ ಸ್ವೀಕಾರ ಮಾಡಲಿದ್ದಾರೆ. ಜನರ ದೂರುಗಳನ್ನು ಸ್ವೀಕರಿಸಲು 10 ಕೌಂಟರ್ ಓಪನ್ ಮಾಡಲಾಗಿದ್ದು ಅಂಗವಿಕಲರು, ಹಿರಿಯರಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ. ಆಯಾ ಇಲಾಖೆಗೆ ಸಂಬಂಧಿಸಿದಂತೆ ಕಂಪ್ಯೂಟರ್ ‌ನಲ್ಲಿ ದೂರುಗಳ ದಾಖಲು ಮಾಡಿಕೊಂಡು ಖುದ್ದು ಸ್ಥಳದಲ್ಲೇ ಜನರ ಸಮಸ್ಯೆಯನ್ನ ಡಿಸಿಎಂ ಡಿಕೆ ಶಿವಕುಮಾರ್ ಆಲಿಸಲಿದ್ದಾರೆ. ಅಲ್ಲದೆ ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡಲು ಕಾರ್ಯಕ್ರಮ ಕೈಗೊಳ್ಳಲಾಗುತ್ತೆ.

ಇಂದು ಕೆ.ಆರ್.ಪುರಂ, ಮಹದೇವಪುರ ಕ್ಷೇತ್ರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ಕೆ.ಆರ್.ಪುರಂ ಐಟಿಐ ಕ್ರೀಡಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 5ರಂದು ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಹಾಗೂ ಯಲಹಂಕ ನ್ಯೂಟೌನ್ ಡಾ. ಅಂಬೇಡ್ಕರ್ ಭವನದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಇನ್ನು ಜನವರಿ 6ರಂದು ಹೆಬ್ಬಾಳ, ಶಿವಾಜಿನಗರ, ಪುಲುಕೇಶಿನಗರ ಸಂಬಂಧಿಸಿದಂತೆ ಸೆಂಟ್ ಜಾನ್ಸ್ ರೋಡ್‌ನಲ್ಲಿರುವ ಆರ್‌ಬಿಎಎನ್ಎಂಎಸ್ ಹೈ ಸ್ಕೂಲ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರು ಸಹ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಅಹವಾಲು ನೀಡಬಹುದಾಗಿದೆ.

ನಾಗರೀಕರಿಗೆ ಆಸನ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಹಾಗೂ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು ಬಗೆಹರಿಸಲು ಸಾಫ್ಟ್ ವೇರ್ ವ್ಯವಸ್ಥೆ ಸಾಪ್ಟ್ ವೇರ್ ನಲ್ಲಿ ದಾಖಲಿಸಲು ಪಾಲಿಕೆ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ವೈ-ಫೈ, ಕಂಪ್ಯೂಟರ್, ಪ್ರಿಂಟರ್ ಹಾಗೂ ಸ್ಕ್ಯಾನರ್ ವ್ಯವಸ್ಥೆಯುಳ್ಳ 15 ಕೌಂಟರ್ ಸ್ಥಾಪನೆ ಮಾಡಲಾಗಿದೆ. ಟೋಕನ್ ಗಳನ್ನು ಪಡೆಯಲು 10 ಕೌಂಟರ್ ಗಳ ಓಪನ್ ಮಾಡಲಾಗಿದೆ.