ಮನೆ ಅಪರಾಧ ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಾಘಾತದಿಂದ ಸಾವು

0

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆಯ ಪಶುವೈದ್ಯ ಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆ ಸೋಮವಾರ ಪೇಟೆಯ ಪಶುವೈದ್ಯ ಶಿವಪ್ಪ ಬಾದಾಮಿ ಎಂಬುವರು ಕ್ರಿಕೆಟ್ ಆಡಿ ಪೋಟೋ ಸೆಷನ್ ನಲ್ಲಿ ಪಾಲ್ಗೊಂಡ ನಂತರ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

ತಕ್ಷಣ ಇತರೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಮೈಸೂರು ವಿಭಾಗ ಮಟ್ಟದ ಪಶುವೈದ್ಯರ ಕ್ರೀಡಾಕೂಟಕ್ಕೆ ಏಳು ಜಿಲ್ಲೆಗಳ 12 ತಂಡಗಳು ಆಗಮಿಸಿದ್ದವು. ಚಿಕ್ಕಮಗಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗು ತಂಡದಿಂದ ಶಿವಪ್ಪ ಬಾದಾಮಿ ಇಂದು ನಗರಕ್ಕೆ ಆಗಮಿಸಿದ್ದರು.

ಒಂದು ಪಂದ್ಯ ಉತ್ಸಾಹದಿಂದ ಆಡಿದ ಅವರು ಗ್ರೂಪ್ ಪೋಟೋ ತಗೆಸಿಕೊಳ್ಳುವ ವೇಳೆ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಮೂಲತಃ ಶಿವಪ್ಪ ಬಾದಾಮಿ ಅವರು ಬೆಳಗಾವಿ ಜಿಲ್ಲೆಯವರಾಗಿದ್ದು, ಅವರ ಹಠಾತ್ ನಿಧನದಿಂದ ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಗಿದೆ. ಈ ಅಕಾಲಿಕ ಮರಣಕ್ಕೆ ಪಶು ವೈದ್ಯರು ಕಂಬನಿ ಮಿಡಿದಿದ್ದಾರೆ.