ಬೆಂಗಳೂರು(Bengaluru): ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ದುಬೈ ಪ್ರವಾಸಕ್ಕೆ ತೆರಳುವ ಮುನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದಿದ್ದಾರೆ.
ಕೇಂದ್ರ ನಾಯಕರ ತೀರ್ಮಾನವೇ ಇದರಲ್ಲಿ ಅಂತಿಮವಾಗಿರಲಿದೆ. ಆದರೆ ಇನ್ನು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಹಳ ಜನ ಪಕ್ಷಕ್ಕೆ ಇನ್ನೂ ಬರುವವರಿದ್ದಾರೆ. ನಮ್ಮ ಪಕ್ಷ ಇನ್ನಷ್ಟು ಬಲವಾಗಲಿದೆ. ನಮ್ಮ ಗುರಿ 150 ಸ್ಥಾನ ಗೆಲ್ಲೋದಾಗಿದೆ. ಪ್ರಧಾನಿಯವರಿಗೆ 150 ಕ್ಷೇತ್ರ ಗೆಲ್ಲುವ ಭರವಸೆ ಕೊಟ್ಟಿದ್ದೇವೆ. ಆ ಗುರಿ ಮುಟ್ಟಲು ರಾಜ್ಯ ಪ್ರವಾಸ ಮಾಡುತ್ತೇವೆ. ಪ್ರತಿ ಜಿಲ್ಲೆಯಿಂದಲೂ ಪಕ್ಷಕ್ಕೆ ಬರುತ್ತಾರೆ, ಅದರಲ್ಲೂ ಮಂಡ್ಯದಿಂದ ಅನೇಕ ಜನ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಯಡಿಯೂರಪ್ಪ, ಯತ್ನಾಳ್ ಹೇಳಿಕೆ ಬಗ್ಗೆ ನಾನೇನೂ ಮಾತನಾಡಲ್ಲ. ಪಕ್ಷದ ನಾಯಕರಿದ್ದಾರೆ, ಅವರು ನೋಡಿಕೊಳ್ಳುತ್ತಾರೆ ಎಂದರು.
ಬೆ. 10.30ರ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ದುಬೈಗೆ ಪ್ರಯಾಣಿಸಲಿದ್ದಾರೆ. ನಾಳೆ ದುಬೈ ಬಸವ ಸಮಿತಿಯಿಂದ ನೀಡಲಿರುವ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.