ಮನೆ ಮನರಂಜನೆ ಫೆ.16ಕ್ಕೆ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿದ ‘ಅಲೆಮಾರಿ ಈ ಬದುಕು’ ತೆರೆಗೆ

ಫೆ.16ಕ್ಕೆ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿದ ‘ಅಲೆಮಾರಿ ಈ ಬದುಕು’ ತೆರೆಗೆ

0

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಅಲೆಮಾರಿ ಈ ಬದುಕು’ ಸಿನಿಮಾ ತೆರೆಗೆ ಬರಲು ತಯಾರಾ ಗುತ್ತಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರ ತಂಡ, ಇತ್ತೀಚೆಗೆ “ಅಲೆಮಾರಿ ಈ ಬದುಕು’ ಸಿನಿಮಾದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಿತು.

ಫಿಲಂ ಚೇಂಬರ್‌ ಅಧ್ಯಕ್ಷ ಎನ್‌. ಎಂ ಸುರೇಶ್‌, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್‌ ಅಹಿಂಸ, ಪರಿಸರವಾದಿ ಪ್ರಕೃತಿ ಪ್ರಸನ್ನ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಅಲೆಮಾರಿ ಈ ಬದುಕು’ ಸಿನಿಮಾದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳನ್ನು ಬಿಡುಗಡೆ ಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಹಿಂದೆ “ಪ್ರೇಮಪೂಜ್ಯಂ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಿದ್ದು ಸಿ. ಕಟ್ಟಿಮನಿ “ಅಲೆಮಾರಿ ಈ ಬದುಕು’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ದಿವ್ಯಕುಮಾರ್‌ ಹೆಚ್‌. ಎನ್‌ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

“ಸಿನಿಮಾದ ಟೈಟಲ್ಲೇ ಹೇಳುವಂತೆ ಇದು ಅಲೆಮಾರಿಗಳ ಕುರಿತಾಗಿರುವ ಸಿನಿಮಾ. ಎಲ್ಲಿಂದಲೂ ಬಂದು ಬದುಕು ಕಟ್ಟಿಕೊಳ್ಳಲು ಹೋರಾಡುವ ಸುತ್ತ ಇಡೀ ಸಿನಿಮಾ ಕಥೆ ಸಾಗುತ್ತದೆ.  ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು ಅಲೆಮಾರಿಗಳು. ಒಂದು ಹಂತ ತಲುಪಬೇಕೆಂದು ಎಲ್ಲೆಲ್ಲೋ ಅಲೆದು ಕೊನೆಗೆ ಈ ಸಿನಿಮಾ ಮಾಡುವವರೆಗೆ ಬಂದಿದ್ದೇವೆ. ನಮ್ಮ ನಡುವೆಯೇ ನಡೆಯುವಂಥ ಹತ್ತಾರು ವಿಷಯಗಳು ಈ ಸಿನಿಮಾದಲ್ಲಿದೆ. ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ’ ಎಂಬುದು ಚಿತ್ರತಂಡದ ವಿಶ್ವಾಸದ ಮಾತು.