ಮನೆ ಕಾನೂನು ಗಳಿಕೆ ರಜೆ ಮಂಜೂರಾತಿಗೆ ಲಂಚ: ಹನೂರು ಬಿಇಒ, ಸಿಆರ್‌ಪಿ ಲೋಕಾಯುಕ್ತ ಬಲೆಗೆ

ಗಳಿಕೆ ರಜೆ ಮಂಜೂರಾತಿಗೆ ಲಂಚ: ಹನೂರು ಬಿಇಒ, ಸಿಆರ್‌ಪಿ ಲೋಕಾಯುಕ್ತ ಬಲೆಗೆ

0

ಹನೂರು : ನಿವೃತ್ತ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ ಮಂಜೂರು ಮಾಡಲು ೧೫ ಸಾವಿರ ಲಂಚ ಪಡೆಯುತ್ತಿದ್ದ ಹನೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್‌ಪಿ ಮುನಿರಾಜು ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ.

ತಾಲ್ಲೂಕಿನ ತೋಮಿಯರ್ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ ೧೩೯ ದಿನಗಳ ಗಳಿಕೆ ರಜೆಯ ಹಣ ೩ ಲಕ್ಷ ಬರಬೇಕಾಗಿತ್ತು. ಗಳಿಕೆ ರಜೆ ಮಂಜೂರು ಮಾಡಲು ಶಿಕ್ಷಣಾಧಿಕಾರಿ ಶಿವರಾಜು ಮತ್ತು ಸಿಆರ್‌ಪಿ ಮುನಿರಾಜು ೧೫ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ನಿವೃತ್ತ ಶಿಕ್ಷಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನೂ ಬಂಧಿಸಿ, ೧೫ ಸಾವಿರ ನಗದು ವಶಕ್ಕೆ ಪಡೆದಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಜಿತ್ ಮತ್ತು ಡಿವೈಎಸ್‌ಪಿ ಮಾಥ್ಯೂಸ್ ಥೋಮಸ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಲೋಹಿತ್ ಕುಮಾರ್, ಶಶಿಕುಮಾರ್ ಸಿಬ್ಬಂದಿ ಮಹದೇವಸ್ವಾಮಿ, ಕುಮಾರ್ ಆರಾಧ್ಯ, ಮಹಾಲಿಂಗಸ್ವಾಮಿ, ಶ್ರೀನಿವಾಸ್, ಗುರು, ಗೌತಮ್, ಐಸಾಕ್ ಮತ್ತು ನಾಗೇಂದ್ರ ಕಾರ್ಯಾಚರಣೆ ನಡೆಸಿದ್ದರು.