ಮನೆ ಸ್ಥಳೀಯ ವಿಫಲ ಕೊಳವೆಬಾವಿ ಮುಚ್ಚದೆ ಅನಾಹುತಗಳಾದರೆ ಅಧಿಕಾರಿಗಳ ತಲೆದಂಡ: ಡಿಸಿ

ವಿಫಲ ಕೊಳವೆಬಾವಿ ಮುಚ್ಚದೆ ಅನಾಹುತಗಳಾದರೆ ಅಧಿಕಾರಿಗಳ ತಲೆದಂಡ: ಡಿಸಿ

0

ಮೈಸೂರು: ಬರ ಪರಿಸ್ಥಿತಿ ಉಲ್ಬಣಗೊಳ್ಳುತಿದ್ದು, ಕುಡಿಯುವ ನೀರಿನ ಅಭಾವ ಕಂಡುಬರುತ್ತಿರುವ ಜಿಲ್ಲೆಯ 108 ಸಮಸ್ಯಾತ್ಮಕ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು

Join Our Whatsapp Group

ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜನಿಯರುಗಳು   ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಮೂಲಗಳ ಸಂರಕ್ಷಣೆ,ನಿರ್ವಹಣೆ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಂಡು ಜನ,ಜಾನುವಾರುಗಳಿಗೆ ನೀರು ಒದಗಿಸಬೇಕೆಂದರು.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ರಂಜಿತ್ ಮಾಹಿತಿ ನೀಡಿ ನೀರಿನ ಕೊರತೆ ಇರುವ ಕಡೆ 9 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ ಹಾಗೂ ಕಲ ಹಳ್ಳಿಗಳಿಗೆ ಹಬ್ಬಗಳ ಸಂದರ್ಭದಲ್ಲಿ ಟ್ಯಾಂಕರ್ ನೀರು ಕೊಡಲಾಗಿದೆ . ಪಿರಿಯಾಪಟ್ಟಣ ನಗರದಲ್ಲಿ ಮಾತ್ರ 9 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಬೇಕಾಬಿಟ್ಟಿಯಾಗಿ ಕೊಳವೆ ಬಾವಿಗಳನ್ನ ತೋಡಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಇಲ್ಲದೆ ಬೋರ್ವೆಲ್ ಕೊರೆಸುವಂತಿಲ್ಲ, ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಿಗೆ 25 ದಿನ ಮುಂಚಿತವಾಗಿ ಅನುಮತಿ ತೆಗೆದುಕೊಳ್ಳಬೇಕು ಹಾಗೂ ಖಾಸಗಿಯವರು ತೋಡಿಸುವ ಕೊಳವೆ ಬಾವಿಗಳು ಸಾರ್ವಜನಿಕ ಕೊಳವೆ ಬಾವಿಗಳಿಗಿಂತ 500 ಮೀ ಅಂತರದಲ್ಲಿರಬೇಕಾದುದು ಕಡ್ಡಾಯ.

ವಿಫಲ ಕೊಳವೆ ಬಾವಿ ಮುಚ್ಚಿ : ವಿಫಲ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಲು ಕ್ರಮವಹಿಸಿ. ವಿಜಯಪುರದಲ್ಲಿ ಆದಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು. ಒಂದು ಗ್ರಾಮಕ್ಕೆ ಕೊಳವೆ ಬಾವಿ ತೋಡುವ ಲಾರಿ ಪ್ರವೇಶವಾದಾಗಲೇ ಅನುಮತಿ ಪಡೆದಿದ್ದಾರ ಪರೀಕ್ಷಿಸಬೇಕು, ಒಂದು ವೇಳೆ ಕೊಳವೆ ಬಾವಿ ವಿಫಲವಾದರೆ ಅದನ್ನು ಸಂಪೂರ್ಣವಾಗಿ ಮುಚ್ಚುವ ಜವಾಬ್ದಾರಿ ಲಾರಿ ಮಾಲೀಕರದೇ ಆಗಿರುತ್ತದೆ. ಒಂದು ವೇಳೆ ಯಾರೂ ವಿಫಲ ಕೊಳವೆ ಬಾವಿ ಮುಚ್ಚದೇ ಅನಾಹುತಗಳು ಸಂಭವಿಸಿದರೆ ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿಗಳ ನೇರ ಹೊಣೆಗಾರರನ್ನಾಗಿ ಮಾಡಿ ಅವರ ತಲೆದಂಡವಾಗಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಂದು ಕಾಲರಾ ಪ್ರಕರಣ ವರದಿಯಾಗಿದ್ದು,ಸುತ್ತಲಿನ 600 ಮನೆಗಳ ತಪಾಸಣೆ ಮಾಡಲಾಗಿದೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬರ ಪರಿಸ್ಥಿತಿ ಇರುವುದರಿಂದ ಬ್ಯಾಂಕಿನವರು ಸಾಲ ವಸೂಲಾತಿಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರು.

ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ನಾಗರಾಜು ಮಾಹಿತಿ ನೀಡಿ, 3 ರಿಂದ 4 ವಾರಗಳಿಗಾಗುವಷ್ಟು ಮೇವಿನ ಲಭ್ಯತೆ ಇದ್ದು, ಈಗಾಗಲೇ 36 ಸಾವಿರ ಮೇವಿನ ಕಿಟ್ ನೀಡಲಾಗಿದ್ದು ಮತ್ತೆ 36 ಸಾವಿರ ಕಿಟ್ ಬಂದಿದ್ದು ವಿತರಿಸಲಾಗುವುದೆಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ರೈತ ಮುಖಂಡರುಗಳು ಕೆಲ ಗ್ರಾಮಗಳಲ್ಲಿ ಮೇವಿನ ಕೊರತೆಯಿದೆಯೆಂದು ಹೇಳುತ್ತಾರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯಿರುವ ಹಳ್ಳಿಗಳಿಗೆ ಭೇಟಿ ನೀಡಿ ಎಂದರು.ಗಡಿ ಭಾಗಗಳಲ್ಲಿ ಮೇವು ಹೊರರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳಿ ಎಂದರು.

ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡಿಸಿ, ಹೊರಗಿನ ಬೀದಿ ಬದಿಯ ಆಹಾರ ಸೇವಿಸದಂತೆ  ಅರಿವು ಮೂಡಿಸಿ, ಹೆಚ್ಚು ನೀರು ಕುಡಿಯುವುದು, ಹತ್ತಿ ಬಟ್ಟೆ ಧರಿಸುವಂತೆ ಮಾಹಿತಿ ನೀಡಿ ಎಂದರು.

ಜನನಿಬಿಡ ಸ್ಥಳಗಳಲ್ಲಿ ಸಂಘ ಸಂಸ್ಥೆಗಳಿಂದ ನೀರಿನ ಅರವಟ್ಟಿಗೆಗಳ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿ ಎಂದರು.

ಸಭೆಯಲ್ಲಿ ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.