ಮನೆ ರಾಷ್ಟ್ರೀಯ ಮದ್ಯನೀತಿ ಹಗರಣ: ಮೇ 7 ರವರೆಗೆ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ

ಮದ್ಯನೀತಿ ಹಗರಣ: ಮೇ 7 ರವರೆಗೆ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ

0

ದೆಹಲಿ ಮದ್ಯನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಬಿಆರ್​ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮೇ 7ರವರೆಗೆ ವಿಸ್ತರಿಸಿದೆ.

Join Our Whatsapp Group

ಇದಕ್ಕೂ ಮುನ್ನ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಏಪ್ರಿಲ್ 1 ರಿಂದ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದಾದ ಬಳಿಕ ನ್ಯಾಯಾಲಯ ಮತ್ತೊಮ್ಮೆ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23ರವರೆಗೆ ವಿಸ್ತರಿಸಿತ್ತು.

ಈ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಇದೀಗ ಮೇ 7ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಹಾಗೆಯೇ ಬಿಆರ್​ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನೂ ಕೂಡ ವಿಸ್ತರಿಸಲಾಗಿದೆ.

ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅಕ್ರಮದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪಾತ್ರ ಗುರುತರವಾಗಿದೆ ಎನ್ನುವುದಕ್ಕೆ, ಮತ್ತು ಅಕ್ರಮದಿಂದ ಬಂದ ಲಾಭವನ್ನು ಮರೆಮಾಚುವ ಪ್ರಯತ್ನ ಮಾಡಿದ್ದರು ಎನ್ನುವುದಕ್ಕೆ ಇಡಿ ಬಲವಾದ ದಾಖಲೆಗಳನ್ನು ಹೊಂದಿದೆ. ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ವೈಯಕ್ತಿಕವಾಗಿಯೂ ಮತ್ತು ಎಎಪಿ ಪಕ್ಷದ ಸಂಚಾಲಕರಾಗಿಯೂ ಭಾಗಿಯಾಗಿದ್ದರು ಎಂಬುದು ತಿಳಿದುಬರುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೋಸ್ಕರ ಬಂಧಿಸಲಾಗಿದೆ ಎನ್ನುವ ಕೇಜ್ರಿವಾಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೋರ್ಟ್, ಅರ್ಜಿದಾರರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಚುನಾವಣಾ ಕಾಲವೋ ಇಲ್ಲವೋ ಆದರೆ, ಕಾನೂನು ಪ್ರಕಾರ ಅವರ ಬಂಧನ ಆಗಿದೆ ಎನ್ನುವುದನ್ನು ಮಾತ್ರ ಕೋರ್ಟ್ ಪರಿಗಣಿಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಈ ಮೊದಲು ಹೇಳಿತ್ತು.