ಮನೆ ಅಪರಾಧ ಕಾಂಗ್ರೆಸ್‌ ಮುಖಂಡೆ, ಸ್ಯಾಂಡಲ್‌ ವುಡ್‌ ಸಿನಿಮಾ ನಟಿಯ ಭೀಕರ ಹತ್ಯೆ: ಪತಿಯಿಂದಲೇ ಕೊಲೆ

ಕಾಂಗ್ರೆಸ್‌ ಮುಖಂಡೆ, ಸ್ಯಾಂಡಲ್‌ ವುಡ್‌ ಸಿನಿಮಾ ನಟಿಯ ಭೀಕರ ಹತ್ಯೆ: ಪತಿಯಿಂದಲೇ ಕೊಲೆ

0

ಮೈಸೂರು: ಕೌಟುಂಬಿಕ ಕಲಹದಿಂದ ಸ್ಯಾಂಡಲ್‌ ವುಡ್‌ ಸಿನಿಮಾ ನಟಿ, ಕಾಂಗ್ರೆಸ್‌ ಮುಖಂಡೆಯನ್ನು ಪತಿಯೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.

Join Our Whatsapp Group

ವಿದ್ಯಾ ನಂದೀಶ್‌ ಕೊಲೆಯಾದ ನಟಿ. ಸೋಮವಾರ ತಡರಾತ್ರಿ ವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ತೆರಳಿದ್ದಾಗ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪತಿ ನಂದೀಶ್‌ ವಿದ್ಯಾಳ ತಲೆಗೆ ಆಯುಧದಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡು ವಿದ್ಯಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಲ್ಲೆ ನಡೆಸಿ ಪತಿ ನಂದೀಶ್‌ ಪರಾರಿ ಆಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ನಂದೀಶ್‌ ವಿದ್ಯಾ ದಂಪತಿಗೆ ಎರಡು ಮಕ್ಕಳಿದ್ದಾರೆ. ಆದರೆ ಇವರಿಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಯಾರು ಈ ವಿದ್ಯಾ?: ವಿದ್ಯಾ ಸಿನಿಮಾ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಶಿವರಾಜ್‌ ಕುಮಾರ್‌ ಅಭಿನಯದ ʼಭಜರಂಗಿʼ ಸಿನಿಮಾದಲ್ಲಿ ನಟಿಸಿದ್ದರು. ಇದಲ್ಲದೆ ಚಿರಂಜೀವಿ ಸರ್ಜಾ ಅವರ ʼಅಜಿತ್‌ʼ ಚಿತ್ರದಲ್ಲಿ ಸ್ನೇಹಿತೆಯ ಪಾತ್ರದಲ್ಲಿ ನಟಿಸಿದ್ದರು. ಕನ್ನಡದ ಹಲವಾರು ಸಿನಿಮಾದಲ್ಲಿ ಪೋಷಕರ ಪಾತ್ರವನ್ನು ಮಾಡಿದ್ದಾರೆ.

ರಾಜಕೀಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು, ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್‌. ಪಿ ಡಾ. ನಂದಿನಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.