ಕಲಬುರಗಿ(Kalburgi): ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ರಾಜ್ಯಕ್ಕೆ 9 ಸಾವಿರ ಕೋಟಿ ಮಂಜೂರಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜೂರಾದ ಅನುದಾನಕ್ಕೆ ಇದೇ 23ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು. ಮಹಾನಗರಗಳ ಅಭಿವೃದ್ಧಿಗೆ ಕೇಂದ್ರದಿಂದ ಅಪಾರ ಹಣ ಹರಿದು ಬರುತ್ತಿದೆ. ಈ ಹಣವನ್ನು ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.
ಕಲಬುರಗಿ ನಗರದ ಕುಡಿಯುವ ನೀರಿನ ಯೋಜನೆಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಕಾಲಮಿತಿಯಲ್ಲಿ ಪೈಪ್ ಲೈನ್ ಜೋಡಣೆ ಮಾಡುವಂತೆ ಸೂಚಿಸಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ. ಚರಂಡಿ ನೀರನ್ನು ಶುದ್ಧಗೊಳಿಸಿ ನಗರದಲ್ಲಿರುವ ಉದ್ಯಾನಗಳಿಗೆ ಪೂರೈಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ವಿವಾದ ಪ್ರಸ್ತುತ ಹೈಕೋರ್ಟ್ ನಲ್ಲಿದೆ. ಮೀಸಲಾತಿ ಹಾಗೂ ಮತದಾರರ ಪಟ್ಟಿ ವಿವಾದದ ಕುರಿತು ನ್ಯಾಯಾಲಯ ನಿರ್ದೇಶನ ನೀಡಬೇಕಿದೆ. ತೀರ್ಪು ಪ್ರಕಟವಾದ ತಕ್ಷಣ ಮೇಯರ್, ಉಪಮೇಯರ್ ಚುನಾವಣೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.