ಮನೆ ರಾಷ್ಟ್ರೀಯ ಜೈಲು ಶಿಕ್ಷೆ ಹೊರತಾಗಿಯೂ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಬಹುದು: ಕಾನೂನು ತಜ್ಞರು

ಜೈಲು ಶಿಕ್ಷೆ ಹೊರತಾಗಿಯೂ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಬಹುದು: ಕಾನೂನು ತಜ್ಞರು

0

ನವದೆಹಲಿ (New Delhi)-ರೋಡ್‌ ರೇಜ್‌ (ರಸ್ತೆ ಜಗಳ) ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು (Navjot Singh Sidhu) ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಚುನಾವಣಾ ಕಾನೂನಿನ ನಿಬಂಧನೆಗಳನ್ನು ಉಲ್ಲೇಖಿಸಿ ಕಾನೂನು ತಜ್ಞರು ಹೇಳಿದ್ದಾರೆ.

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾಗಿದ್ದರೆ ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಿದ್ದರು. ಆದರೆ ಹಾಲಿ ಪ್ರಕರಣದಲ್ಲಿ ಸಿದುಗೆ ಒಂದು ವರ್ಷ ಜೈಲು ಶಿಕ್ಷೆ ಮಾತ್ರ ಆಗಿದ್ದು, ಹೀಗಾಗಿ ಈ ನಿಯಮ ಸಿದುಗೆ ಅನ್ವಯಿಸುವುದಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ-1951 ರ ಸೆಕ್ಷನ್ 8 ಅನರ್ಹತೆಯೊಂದಿಗೆ ವ್ಯವಹರಿಸುತ್ತದೆ ಎಂದು ಕಾನೂನು ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರು ತಿಳಿಸಿದ್ದಾರೆ. 

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಎಸ್ ಕೆ ಕೌಲ್ ಅವರ ಪೀಠವು ಸಿಧುಗೆ ಶಿಕ್ಷೆಯ ವಿಷಯದ ಕುರಿತು ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿತು. ಈ ಪ್ರಕರಣದಲ್ಲಿ 65 ವರ್ಷದ ವ್ಯಕ್ತಿಗೆ ‘ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಅಪರಾಧಕ್ಕಾಗಿ ಸಿಧು ಅವರನ್ನು ಮೇ 2018 ರಲ್ಲಿ ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಪರಿಗಣಿಸಿದ್ದರೂ ಅದು ಅವರಿಗೆ ಜೈಲು ಶಿಕ್ಷೆಯನ್ನು ತಪ್ಪಿಸಿ ಮತ್ತು ರೂ. 1,000 ದಂಡವನ್ನು ಮಾತ್ರ ವಿಧಿಸಿತ್ತು. 

ಸೆಪ್ಟೆಂಬರ್ 2018 ರಲ್ಲಿ ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು. ದಾಖಲೆಯ ಮುಖಾಂತರ ಸ್ಪಷ್ಟವಾದ ದೋಷವಿದೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ನಾವು ಶಿಕ್ಷೆಯ ವಿಷಯದ ಕುರಿತು ಮರುಪರಿಶೀಲನಾ ಅರ್ಜಿಯನ್ನು ಅನುಮತಿಸಿದ್ದೇವೆ. ದಂಡದ ಜತೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಸೂಕ್ತ ಎಂದು ಪರಿಗಣಿಸುತ್ತೇವೆ ಎಂದು ತೀರ್ಪು ಪ್ರಕಟಿಸುವ ವೇಳೆ ಪೀಠ ಹೇಳಿದೆ. ಮಾಜಿ ಕ್ರಿಕೆಟಿಗ ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.