ಮನೆ ಅಪರಾಧ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

0

ಬಂಟ್ವಾಳ(ದಕ್ಷಿಣಕನ್ನಡ): ವಿಶ್ವಕಪ್ ವಿಜೇತ ಭಾರತ ಕಬಡ್ಡಿ ತಂಡದ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಮಾಣಿಯ ಉದಯ್ ಚೌಟ (46) ಮಂಗಳೂರಿನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮೃತರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಉದಯ್ ಚೌಟ ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಕಚೇರಿಯಲ್ಲಿ ಉಪಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾಣಿ ಬದಿಗುಡ್ಡೆ ನಿವಾಸಿಯಾಗಿದ್ದ ಉದಯ್ 2007ರ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಇರಾನ್ ತಂಡವನ್ನು 29-19ರ ಅಂತರದಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ ಲಭಿಸಿತ್ತು.

ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದ್ದ ಅವರು, ಮಂಗಳೂರು ವಿವಿಯನ್ನು ಕಬಡ್ಡಿಯಲ್ಲಿ ಪ್ರತಿನಿಧಿಸಿದ್ದರು. ಜ್ಯೂನಿಯರ್ ನ್ಯಾಷನಲ್​ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಅವರು, 2000ದಿಂದ 2008ರವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು.

ಉದಯ್ ಕ್ರೀಡಾ ಸಾಧನೆಗೆ ಹಲವು ಪ್ರಶಸ್ತಿಗಳು ದೊರಕಿವೆ. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್​​ ಉಪಾಧ್ಯಕ್ಷರಾಗಿದ್ದ ಅವರು ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರರಾಗಿದ್ದ ಉದಯ್​, 2004ರಲ್ಲಿ ಭಾರತ, ಬಾಂಗ್ಲಾ ಟೆಸ್ಟ್ ಕಬಡ್ಡಿ ಟೂರ್ನಿಯಲ್ಲಿ 5 ಪಂದ್ಯ ಜಯಿಸಿ ಚಿನ್ನದ ಪದಕ ಗಳಿಸಿದ್ದರು.