ಮೈಸೂರು: ದಶಕಗಳಿಂದ ಸಮಸ್ಯೆ ನಡುವೆ ಜೀವನ ಸಾಗಿಸುತ್ತಿರುವ ಖಾಸಗಿ ಬಡಾವಣೆ ನಿವಾಸಿಗಳ ಕೂಗಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂಧಿಸದಿರುವುದನ್ನು ಖಂಡಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಜು.15ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ನಗರ ಹೊರವರ್ತುಲ ರಸ್ತೆಯಿಂದ ಪೂರ್ವಭಾಗದಲ್ಲಿರುವ 27 ಖಾಸಗಿ ಬಡಾವಣೆಗಳ ಸಂಘಟನೆಗಳು ಒಟ್ಟಾಗಿ ಸೇರಿ ರಚಿಸಲಾಗಿರುವ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಮಾನಸಿನಗರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಎಲ್ಲಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಸಹಮತ ಸೂಚಿಸಿದವು.
ಸಭೆಯ ಆರಂಭದಲ್ಲಿ ಪ್ರತಿ ಬಡಾವಣೆಯಿಂದ ಸಲಹೆ ಸ್ವೀಕರಿಸಲಾಯಿತು. ಈ ವೇಳೆ ಮಾತನಾಡಿದ ಹಲವು ಬಡಾವಣೆಗಳ ಸಂಘಟನೆಗಳ ಪ್ರಮುಖರು, ಪ್ರತಿ ಮನೆಗೆ ಒಬ್ಬರಂತೆ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಮಹಿಳೆಯರಿಂದ ಖಾಲಿ ಕೊಡಗಳ ಪ್ರದರ್ಶನ ಆಗಬೇಕು. ಆಯಾ ಬಡಾವಣೆಗಳ ಸಮೀಪವೇ ಪ್ರಮುಖ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಮಾಡುವುದು. ಪ್ರತಿಯೊಬ್ಬರು ತಮ್ಮೊಂದಿಗೆ ಕನಿಷ್ಠ ಇಬ್ಬರನ್ನು ಕರೆತರಬೇಕು. ಪ್ರತಿಭಟನೆ ವೇಳೆ ಬಿತ್ತಿಪತ್ರದ ಪ್ರದರ್ಶನ ಆಗಬೇಕು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬಡಾವಣೆಗಳಿಗೆ ಅಧಿಕಾರಿಗಳನ್ನು ಕರೆಸುವ ಕೆಲಸ ಆಗಬೇಕು ಎಂಬುದು ಸೇರಿದಂತೆ ಹಲವಾರು ಅಭಿಪ್ರಾಯ ಹಾಗೂ ಸಲಹೆಗಳು ಕೇಳಿಬಂದವು.
ಒಕ್ಕೂಟದ ಅಡಿಯಲ್ಲಿರುವ ಪೂರ್ವ ವಲಯದ 27 ಬಡಾವಣೆಗಳಲ್ಲಿ, ರಸ್ತೆ, ಕುಡಿಯಲು ಕಾವೇರಿ ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕಾಗಿ ಪ್ರಬಲವಾಗಿ ಒತ್ತಡ ಹೇರಬೇಕು ಎಂಬ ಸೂಚನೆ ಒಕ್ಕೂಟದ ಎಲ್ಲಾ ಸದಸ್ಯರಿಂದ ವ್ಯಕ್ತವಾಯಿತು.
ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆದ ಬಳಿಕ ಅಂತಿಮವಾಗಿ ಜುಲೈ 15ರಂದು ಬೆಳಗ್ಗೆ 9.30ಕ್ಕೆ ದೇವೇಗೌಡ ವೃತ್ತದ ಸಮೀಪವಿರುವ ಕೆಎಂಎಫ್ ಬಡಾವಣೆಯ ಉದ್ಯಾನವನದಲ್ಲಿ ಜಮಾಯಿಸಿ ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಜಾಥಾದಲ್ಲಿ ತೆರಳಲು ನಿರ್ಧರಿಸಲಾಯಿತು.
ಮೌನವಾಗಿದ್ದಷ್ಟು ಸವಾರಿ ಮಾಡುವ ಸರ್ಕಾರಿ ವ್ಯವಸ್ಥೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಮಾತನಾಡಿ, ಲೇಔಟ್ ಡೆವಲಪರ್ ಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾದರೆ, ಅಧಿಕಾರಿಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಇದರ ಕೆಟ್ಟ ಫಲ ಅನುಭವಿಸುತ್ತಿರುವವರು ಬಡಾವಣೆಯ ಜನ. ಮುಂದಿನ ಮಕ್ಕಳಿಗೆ ನಾವು ಉತ್ತಮ ವಾತಾವರಣ ಬಿಟ್ಟುಕೊಡದಿದ್ದಲ್ಲಿ ಅವರು ನಮಗೆ ಶಾಪ ಹಾಕುತ್ತಾರೆ. ನಾವು ಮೌನವಾಗಿದ್ದಷ್ಟು ಸರ್ಕಾರಿ ವ್ಯವಸ್ಥೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ನಾವು ತತ್ ಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ನೀರಿನ ಮಲೀನತೆಯಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ೨೫೦ ಟಿಎಂಸಿ ನೀರು ಇದ್ದರೂ, ಕುಡಿಯುವ ನೀರಿಗಾಗಿ ಮೈಸೂರಿನ ಜನ ಪರದಾಡುವಂತಾಗಿದೆ. ವ್ಯವಸ್ಥಿತ ನೀರಿನ ಜಾಲ ಇಲ್ಲ. ಮೈಸೂರಿನ ಜನರ ನೀರಿನ ದಾಹ ತಣಿಸಲು ಕೇವಲ ಎರಡು ಟಿಎಂಸಿ ನೀರು ಸಾಕು. ಆದರೆ, ರಿಂಗ್ ರಸ್ತೆ ಆಚೆಗೆ ನೀರಿಲ್ಲ. ನಮ್ಮ ನೀರನ್ನು ಬೆಂಗಳೂರಿನ ಜನ ಎಂಜಾಯ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ ಎಂದರು.
ಮುಡಾದವರು ಒಳಚರಂಡಿ ವ್ಯವಸ್ಥೆಯನ್ನು ಒಂದಕ್ಕೊಂದು ಲಿಂಕ್ ಮಾಡಿ, ಅದನ್ನು ಶುದ್ದೀಕರಣ ಮಾಡಿ ಮರುಬಳಕೆ ಮಾಡುವ ಯೋಜನೆ ಮಾಡಿದಲ್ಲಿ ಸಮಸ್ಯೆ ಭಾಗಶಃ ನಿವಾರಣೆ ಆಗಲಿದೆ. ಈ ಮೂಲಕ ಮಲೀನಗೊಂಡಿರುವ ಕೆರೆ ಕಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದು ಹೇಳಿದರು.
ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಬೇಕು. ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ ನಿವಾರಣೆ ತಕ್ಷಣದ ಆದ್ಯತೆ ಆಗಬೇಕು. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ. ಇದನ್ನು ಅರಿತು ನಾವು ಎಚ್ಚರಿಕೆಯಿಂದ ಹೆಜ್ಜೆ ಇಡದಿದ್ದರೆ ಅಧಿಕಾರಿಗಳು ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ಒಕ್ಕೂಟದ ಅಡಿಯಲ್ಲಿನ 27 ಬಡಾವಣೆಗಳಲ್ಲಿ ವಿದ್ಯುತ್ ಸಮಸ್ಯೆಯೂ ಮಿತಿಮೀರಿದೆ. ಸಾರಿಗೆ ಬಸ್ ವ್ಯವಸ್ಥೆ ಅದ್ವಾನ ಹೇಳತೀರದಾಗಿದೆ. ನೀರಿನ ಗಡಸುತನ ಮೇರೆ ಮೀರಿದ್ದು, ಕೆಲವೇ ದಿನಗಳ ಅಂತರದಲ್ಲಿ ಇಡೀ ಜನತೆ ಎಲ್ಲಾ ಖಾಯಿಲೆಗಳಿಂದ ಬಳಲುವುದು ನಿಚ್ಚಳವಾಗಿದೆ. ಬಡಾವಣೆಯಲ್ಲಿರುವ ಅವೈಜ್ಞಾನಿಕ ರಸ್ತೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನ ಸೆಳೆಯಬೇಕು ಎಂದರು.
ಡಿಸಿ, ನೀರಾವರಿ, ಮುಡಾ, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್, ಸಣ್ಣ ನೀರಾವರಿ, ಚೆಸ್ಕಾಂ, ವಿದ್ಯುತ್, ರಸ್ತೆ ಸಾರಿಗೆ ಸೇರಿದಂತೆ ಎಲ್ಲಾ ಇಲಾಖೆಗೂ ಪತ್ರ ಬರೆದು ಗಮನ ಸೆಳೆಯಲಾಗಿದೆ. ಅವರ ಮೇಲೆ ಮತ್ತಷ್ಟು ಒತ್ತಡ ಹೇರಬೇಕಾದ ಅನಿವಾರ್ಯತೆ ಇದೆ. ನಾವು ತೆರಿಗೆದಾರರು, ನಮ್ಮ ಮೂಲಸೌಕರ್ಯ ಕೇಳುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಈ ಹೋರಾಟ ಒಂದು ಐತಿಹಾಸಿಕ ಹೋರಾಟ ಆಗಬೇಕು. ಪಾದಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ಮಾಡಬೇಕು. ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದ್ದರೂ, ಮತ್ತೊಮ್ಮೆ ಮಗದೊಮ್ಮೆ ಎಲ್ಲರಿಗೂ ಅರಿವು ಮೂಡಿಸುವ ಮೂಲಕ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಭಟ್ ಸೇರಿದಂತೆ ಒಕ್ಕೂಟದ ನಿರ್ದೇಶಕರು, 27 ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.