ಮನೆ ಸುದ್ದಿ ಜಾಲ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

0

ಸರಗೂರು (saragur)- ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಡೀಪುರ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಮೊಳೆಯೂರು ವಲಯದಲ್ಲಿ ನಡೆದಿದೆ.

ತಾಲ್ಲೂಕಿನ ಕಲ್ಲಹಳ್ಳ ಹಾಡಿಯ ರಾಜಪ್ಪ (60) ಗಾಯಗೊಂಡಿರುವವರು. ರಾಜಪ್ಪ ಅವರು ತಮ್ಮ ಹಾಡಿಯ ಜಮೀನಿನ ಸಮೀಪ ಕಾಡಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ದಾಳಿಯಿಂದಾಗಿ ರಾಜಪ್ಪರ ತಲೆ, ಭುಜ ಮತ್ತು ಎರಡು ಕಾಲಿನ ಮಧ್ಯ ಭಾಗದಲ್ಲಿ ತೀವ್ರವಾದ ಗಾಯಗಳಾಗಿವೆ.

ಕೆಲಸ ಮುಗಿಸಿ ಹಿಂದಿರುತಿದ್ದ ವೇಳೆ ವಿಚಾರ ತಿಳಿದ ಬಿ.ಮಟಕೆರೆ ಸರ್ಕಾರಿ ಆಸ್ಪತ್ರೆಯ ವೈದ್ಯ ಚಂದ್ರಶೇಖರ್ ಅವರು ತಮ್ಮ ವಾಹನದಲ್ಲಿ ರಾಜಪ್ಪ ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಜಪ್ಪರವರನ್ನು ಕೂಡಲೇ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ಪುಟ್ಟರಾಜು, ಆದಿ ವಾಸಿ ಮುಖಂಡ ವೆಂಕಟಸ್ವಾಮಿ ಮುಂತಾದವರು ಭೇಟಿ ನೀಡಿದ್ದು, ಚಿಕಿತ್ಸೆ ಕೊಡಿಸುವುದಾಗಿ ಅರಣ್ಯ ಇಲಾಖೆ ಭರವಸೆ ನೀಡಿದರು.