ಮನೆ ರಾಷ್ಟ್ರೀಯ ಎಎಪಿ ನಾಯಕರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದರ ಬಗ್ಗೆ ಇ.ಡಿ ಪ್ರಕರಣ ದಾಖಲಿಸಬಹುದು: ಅತಿಶಿ ವಾಗ್ದಾಳಿ

ಎಎಪಿ ನಾಯಕರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದರ ಬಗ್ಗೆ ಇ.ಡಿ ಪ್ರಕರಣ ದಾಖಲಿಸಬಹುದು: ಅತಿಶಿ ವಾಗ್ದಾಳಿ

0

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದರ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಬಹುದು  ಎಂದು ದೆಹಲಿ ಸಚಿವೆ ಅತಿಶಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಜಲ ಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ಶುಕ್ರವಾರ ದೆಹಲಿಯ ಹಲವಡೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಇದೇ ವೇಳೆ ₹40 ನಗದು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲೇ ಎಎಪಿ ನಾಯಕರು ಇ.ಡಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಜಾರಿ ನಿರ್ದೇಶನಾಲಯವು ಯಾರ ವಿರುದ್ಧ ಕೆಲಸ ಮಾಡುತ್ತಿದೆ. ಯಾರ ಆದೇಶದ ಮೇರೆಗೆ ಕೆಲಸ ಮಾಡುತ್ತದೆ ಹಾಗೂ ಇ.ಡಿಯನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಸತಾರದ ಸಕ್ಕರೆ ಕಾರ್ಖಾನೆಯ ಹಗರಣ, ನೀರಾವರಿ ಹಗರಣದಿಂದ ಪಾರಾಗಿದೇ ಇದಕ್ಕೆ ಸಾಕ್ಷಿ’ ಎಂದು ಅತಿಶಿ ಟೀಕಿಸಿದ್ದಾರೆ.

ಹಿಮಂತ ಬಿಸ್ವ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿಯಾದ ಬಳಿಕ ಅವರ ವಿರುದ್ಧದ ‘ಹೈಡ್ರೊ ಪವರ್ ಹಗರಣ’ ಪ್ರಕರಣವನ್ನು ಮುಚ್ಚಿಹಾಕಲಾಯಿತು ಎಂದು ಅವರು ದೂರಿದ್ದಾರೆ.

ಇ.ಡಿ ಅಧಿಕಾರಿಗಳು ಸದ್ಯ ದೆಹಲಿ ಜಲ ಮಂಡಳಿ ವಿರುದ್ಧ ಮಾತ್ರವೇ ಪ್ರಕರಣ ದಾಖಲಿಸಿದೆ. ‌ಉಳಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನೂ ಹಲವು ಇಲಾಖೆಗಳು ಬಾಕಿ ಇವೆ. ಉಸಿರಾಟದ ಇಲಾಖೆ ಇದ್ದರೆ, ಎಎಪಿ ಸದಸ್ಯರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದರ ಕುರಿತು ಪ್ರಕರಣ ದಾಖಲಿಸಬಹುದು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇ.ಡಿ ಅಧಿಕಾರಿಗಳು ಎರಡು ವರ್ಷಗಳಿಂದ ‘ಅಬಕಾರಿ ನೀತಿ ಹಗರಣ’ದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾವುದೇ ತಪ್ಪು ಕಂಡು ಬಂದಿಲ್ಲ. ಆದೇ ರೀತಿ ಶಾಲೆಗಳ ನಿರ್ಮಾಣ, ಮೊಹಲ್ಲಾ ಕ್ಲಿನಿಕ್‌ಗಳ ಕುರಿತು ತನಿಖೆ ಮಾಡುತ್ತಿದ್ದಾರೆ ಅಲ್ಲಿಯೂ ಲೋಪ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಪಕ್ಷವು (ಎಎಪಿ) ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತದೆ ಹಾಗೂ ವಿರೋಧಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಗುಡುಗಿದ್ದಾರೆ.