ಮನೆ ರಾಷ್ಟ್ರೀಯ ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್, ಸರ್ಕಾರಿ ಫಲಕ ಅಳವಡಿಕೆ: ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್...

ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್, ಸರ್ಕಾರಿ ಫಲಕ ಅಳವಡಿಕೆ: ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವರ್ಗಾವಣೆ

0

ಮುಂಬೈ: ಮಹಾರಾಷ್ಟ್ರ ಕೇಡರ್‌ ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Join Our Whatsapp Group

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಸಂದರ್ಭದಲ್ಲಿ ಇತರ ಹಿಂದುಳಿದ ವರ್ಗಗಳ ಪ್ರಮಾಣ ಪತ್ರವನ್ನು ಪೂಜಾ ಸಲ್ಲಿಸಿರುವುದು ನಕಲಿ ಎಂಬ ಆರೋಪವೂ ಇದೀಗ ಕೇಳಿಬಂದಿದೆ.

 ಪೂಜಾ ಖೇಡ್ಕರ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 841ನೇ ರ‍್ಯಾಂಕ್ ಪಡೆದಿದ್ದರು. ಪ್ರೊಬೇಷನರಿ ಹುದ್ದೆಯ ಅವಧಿಯಲ್ಲಿ ಇವರ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಪುಣೆಯಿಂದ ವಾಶೀಂ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿದೆ.

ನೇಮಕಾತಿ ಸಂದರ್ಭದಲ್ಲಿ ನಕಲಿ ಒಬಿಸಿ ಪ್ರಮಾಣಪತ್ರದ ಜತೆಗೆ, ದೃಷ್ಟಿ ದೋಷ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಮಾಣಪತ್ರವನ್ನೂ ಇವರು ಸಲ್ಲಿಸಿದ್ದರು. ಇವುಗಳ ಪರಿಶೀಲನೆಗೆ ದೆಹಲಿಯಲ್ಲಿರುವ ಏಮ್ಸ್‌ಗೆ ಹಾಜರಾಗಿ ಪರೀಕ್ಷೆಗೆ ಒಳಪಡುವಂತೆ ಸೂಚಿಸಲಾಗಿತ್ತು. ಆದರೆ ಕೋವಿಡ್ ನೆಪ ನೀಡಿ ಅವರು ಇದಕ್ಕೆ ಹಾಜರಾಗಲಿಲ್ಲ.  ಹೀಗೆ ಐದು ಬಾರಿ ಪರೀಕ್ಷೆಗೆ ಗೈರಾಗಿದ್ದ ಪೂಜಾ, ಆರನೇ ಬಾರಿಗೆ ಪರೀಕ್ಷೆ ಎದುರಿಸಿದರು. ಆದರೆ ದೃಷ್ಟಿ ದೋಷದ ಪರೀಕ್ಷೆಗೆ ಅಗತ್ಯವಿದ್ದ ಎಂಆರ್‌ಐ ತಪಾಸಣೆಗೆ ಮತ್ತೆ ಗೈರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಅವರೂ ಸರ್ಕಾರಿ ಅಧಿಕಾರಿಯಾಗಿದ್ದರು. ನಂತರ ರಾಜೀನಾಮೆ ಸಲ್ಲಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನಾಮಪತ್ರದೊಂದಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಇವರ ಒಟ್ಟು ಆಸ್ತಿ ಮೌಲ್ಯ ₹40 ಕೋಟಿ ಎಂದು ನಮೂದಿಸಿದ್ದರು. ಆದರೆ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೂಜಾ ಅವರು ಇತರ ಹಿಂದುಳಿದ ವರ್ಗಗಳ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಆದರೆ ಪ್ರಮಾಣಪತ್ರ ಸಲ್ಲಿಸಲು ಒಬಿಸಿ ಕೆನೆಪದರದ ಮಿತಿ ವಾರ್ಷಿಕ ₹8 ಲಕ್ಷ ಆದಾಯ ಮೀರುವಂತಿಲ್ಲ ಎಂಬುದು ಸರ್ಕಾರದ ಕಾನೂನು. ಹೀಗಾಗಿ ಪೂಜಾ ಅವರು ಆರಂಭದಿಂದಲೂ ವಿವಾದ ಎದುರಿಸುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರೊಬೇಷನರಿ ಅಧಿಕಾರಿಯಾಗಿ ಪುಣೆಯಲ್ಲಿ ವರದಿ ಮಾಡಿಕೊಂಡ ಪೂಜಾ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಲ್ಲಿ ಪ್ರಮುಖವಾಗಿ ತಮ್ಮ ಸ್ವಂತ ಬಳಕೆಯ ಔಡಿ ಕಾರಿಗೆ ಬೀಕನ್ ಅಳವಡಿಸಿದ್ದು, ವಿಐಪಿ ನಂಬರ್‌ ಪ್ಲೇಟ್ ಅಳವಡಿಕೆ ಹಾಗೂ ಸರ್ಕಾರಿ ವಾಹನ ಎಂದು ನಮೂದಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

 ಇದರೊಂದಿಗೆ ಪುಣೆಯ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆ ಅವರು ರಜೆಯಲ್ಲಿದ್ದಾಗ ಅವರ ಕಚೇರಿಯನ್ನು ಬಳಸಿದ ಪೂಜಾ, ಅಲ್ಲಿರುವ ಪೀಠೋಪಕರಣಗಳನ್ನು ಬದಲಿಸಲು ಸೂಚಿಸಿದ್ದರು. ಜತೆಗೆ ಲೆಟರ್‌ಹೆಡ್‌ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ನೇಮಕಗೊಂಡ ನಂತರ ಮೊದಲ 2 ವರ್ಷ ಪ್ರೊಬೇಷನರಿ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಸವಲತ್ತುಗಳು ಇವರಿಗೆ ಇರುವುದಿಲ್ಲ. ಹೀಗಿದ್ದರೂ ಇವರ ವರ್ತನೆಯಿಂದ ಬೇಸತ್ತಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಸುಹಾಸ್ ದಿವಾಸೆ ಹಾಗೂ ರಾಜ್ಯ ಮುಖ್ಯ ಆಯುಕ್ತ ಸುಜಾತಾ ಸೌನಿಕ್ ಅವರಿಗೆ ದೂರು ನೀಡಿದ್ದರು.