ಮನೆ ಅಪರಾಧ ವಿಜಯಪುರ: ಬಾಗಿಲ ಕೊಂಡಿ ಕತ್ತರಿಸಿ ನಗ-ನಗದು ಕಳ್ಳತನ

ವಿಜಯಪುರ: ಬಾಗಿಲ ಕೊಂಡಿ ಕತ್ತರಿಸಿ ನಗ-ನಗದು ಕಳ್ಳತನ

0

ವಿಜಯಪುರ: ಬೀಗ ಹಾಕಿದ್ದ ಮನೆಯಲ್ಲಿ ಬಾಗಿಲ ಕೊಂಡಿ ಕತ್ತರಿಸಿ ನಗ-ನಗದು ಕಳ್ಳತನ ಮಾಡಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

Join Our Whatsapp Group

ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿರುವ ಮಹಮ್ಮದ್ ಹುಸೇನ್ ಎಂಬವರ ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ‌ ನಡೆದಿದೆ.

ಮೊಹರಮ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲೇ ಇರುವ ಮತ್ತೊಂದು ಮನೆಗೆ ಕುಟುಂಬದ ಸದಸ್ಯರು ಹೋಗಿದ್ದರು. ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಹುಸೇನ್ ಕೂಡ ಹುಡ್ಕೋ ಕಾಲೋನಿಯಲ್ಲಿನ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರಿದ್ದ ಮನೆಗೆ ಹೋಗಿದ್ದರು.

ಈ ವೇಳೆ ಹೊಂಚು‌ ಹಾಕಿರುವ ಕಳ್ಳರು ಮನೆಯ ಚಿಲಕದ ಕೊಂಡಿ ಕತ್ತರಿಸಿ ಒಳಗೆ ಪ್ರವೇಶಿಸಿದ್ದು, ಚಿನ್ನಾಭರಣ, ನಗದು ಇರಿಸಿದ್ದ ತಿಜೋರಿಗಳನ್ನು ಮುರಿದು ಕಳ್ಳತನ ಮಾಡಿದ್ದಾರೆ.

ಉದ್ಯಮ ನಡೆಸುತ್ತಿರುವ ಹುಸೇನ್ ವ್ಯಾಪಾರ ವಹಿವಾಟಿನಿಂದ ಮಂಗಳವಾರ ಸಂಗ್ರಹಿಸಿದ್ದ 14,300 ರೂ. ನಗದು, ಚಿನ್ನದ ಉಂಗುರ, ಚಿನ್ನ-ಬೆಳ್ಳಿಯ ನಾಣ್ಯಗಳು ಸೇರಿದಂತೆ ಇತರೆ ವಸ್ತುಗಳು ಕಳ್ಳತನವಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಮಾಹಿತಿ ಲಭ್ಯವಾಗಿದೆ.

ಕಳ್ಳತನ ನಡೆದಿರುವ ಹುಸೇನ್ ಅವರ ಮನೆಯ ಪಕ್ಕದಲ್ಲೇ ಶಾಸಕರ ಮನೆಯೂ ಇದ್ದು, ಇಂಥ ಪರಿಸರದಲ್ಲೇ ಕಳ್ಳತನ ನಡೆದಿರುವುದು ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಶೋಧ ಆರಂಭಿಸಿದ್ದಾರೆ.