ಮನೆ ರಾಜ್ಯ ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಭಾರಿ ಮಳೆ: ಬೆಳಗಾವಿಯಲ್ಲಿ ಪ್ರವಾಹದ ಭೀತಿ

ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಭಾರಿ ಮಳೆ: ಬೆಳಗಾವಿಯಲ್ಲಿ ಪ್ರವಾಹದ ಭೀತಿ

0

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಇರದಿದ್ದರೂ ಸಹ ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಿಗೆ ಜೀವ ಕಳೆ‌ಬಂದಿದೆ.

Join Our Whatsapp Group

ಕೃಷ್ಣಾ, ವೇದಗಂಗಾ, ದೂದಗಂಗಾ, ಮಲಪ್ರಭಾ, ಘಟಪ್ರಬಾ ನದಿಗಳು ತುಂಬಿ ಹರಿಯುತ್ತಿವೆ. ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಬೆಳಗಾವಿಗೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ ಜಲಾಶಯ ಭರ್ತಿಯಾಗೋಕೆ ಕೇವಲ ಐದು ಅಡಿ ನೀರು ಮಾತ್ರ ಬಾಕಿ ಇದೆ.‌ ಐದು ಅಡಿ ನೀರು ಭರ್ತಿಯಾದರೆ ಅಧಿಕೃತವಾಗಿ ‌ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ಮಾಡಲಿದ್ದಾರೆ. ಮಾರ್ಕಂಡೇಯ ನದಿಗೆ ನೀರು ಬಿಟ್ರೇ ನದಿ ಪಾತ್ರದ ಜನರಿಗೆ ಆತಂಕ ಶುರುವಾಗಲಿದೆ.

ನಿರಂತರ ಮಳೆಯಿಂದಾಗಿ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಲ್ಕು ಸೇತುವೆ ‌ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ‌ ನಿರ್ಮಿಸಿರುವ ಒಂದು ಸೇತುವೆ ಸೇರಿ ಒಟ್ಟು ಐದು ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ ಕುನ್ನೂರು-ಬಾರವಾಡ, ಕಾರದಾಗಾ-ಬೋಜ್, ಕುನ್ನೂರು-ಭೋಜವಾಡಿ, ದತ್ತವಾಡ-ಮಲಿಕವಾಡ, ಬಾವನಸೌಂದತ್ತಿ- ಮಾಂಜರಿ ಸಂಪರ್ಕಿಸುವ ಕೆಳ‌ ಹಂತದ ಸೇತುವೆಗಳು ಮುಳುಗಡೆಯಾಗಿವೆ.‌ ಇನ್ನೂ ಯಕ್ಸಂಬಾ ಬಳಿ ದೂದಗಂಗಾ ನದಿ ಪಕ್ಕದಲ್ಲಿರುವ ಮುಲ್ಕಾನಿ ದರ್ಗಾ ಎರಡನೇ ಬಾರಿಗೆ ದೂದಗಂಗಾ ನದಿ ನೀರು ಆವರಿಸಿದೆ.

ಇತ್ತ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರಕ್ಕೆ ಕೃಷ್ಣೆ ಸುತ್ತುವರೆದಿದೆ. ಸದ್ಯ 75ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿದ್ದು ಇದರಿಂದ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ನೆರೆಯ ರಾಜ್ಯ ಕೊಲ್ಲಾಪುರದ ಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರಕ್ಕೆ ಕೃಷ್ಣಾ ನದಿ ನೀರು‌ ನುಗ್ಗಿದ್ದು ನಡು ಮಟ್ಟದ ನೀರಲ್ಲೇ‌ ಭಕ್ತರು ದತ್ತ ದೇವನ ದರ್ಶನ ಪಡೆಯುತ್ತಿದ್ದಾರೆ.