ಮನೆ ರಾಜ್ಯ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ ಹೆಚ್ಚು ರೈತರ ಬೇಡಿಕೆ: ಸಚಿವ ಪ್ರಲ್ಹಾದ ಜೋಶಿ

ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ ಹೆಚ್ಚು ರೈತರ ಬೇಡಿಕೆ: ಸಚಿವ ಪ್ರಲ್ಹಾದ ಜೋಶಿ

0

ನವದೆಹಲಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.

Join Our Whatsapp Group

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಿಂದ ನಮಗೆ ಬರೋಬ್ಬರಿ 1,79,588 ಸೋಲಾರ್ ಪಂಪ್‌ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ವಿವರಿಸಿದರು.

ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲ-ಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಸೂರ್ಯ ಘರ್​ಗೆ 1.30 ಕೋಟಿ ನೋಂದಣಿ

ಪಿಎಂ ಕುಸುಮ್ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್‌ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕ ವಾಗಿದೆ. ಇನ್ನು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 2024ರವರೆಗೆ 1.30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸೂರ್ಯ ಘರ್ ಯೋಜನೆಗೆ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸ್ವೀಕರಿಸಲಾಗಿದೆ. ಸುಮಾರು 2.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರಗಳಿಂದಾಗಿ, ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತ ನಂ.4ನೇ ಸ್ಥಾನದಲ್ಲಿದೆ. ಪವನ ಶಕ್ತಿ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸೌರ ಪಿವಿ ಸಾಮರ್ಥ್ಯದಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

NDA ಸರ್ಕಾರ 21000 ಕೋಟಿ ವೆಚ್ಚ ಮಾಡಲಿದೆ: ಯುಪಿಎ ಆಡಳಿತಾವಧಿಯ ಒಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಸರ್ಕಾರ ಕೇವಲ 6091 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ, NDA ಸರ್ಕಾರ ಈ ವರ್ಷವೇ ಬರೋಬ್ಬರಿ 21,000 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತ ಈಗ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಯಾವ ಅಂತರಾಷ್ಟ್ರೀಯ ಸಂಸ್ಥೆಯು ಭಾರತದಲ್ಲಿ ಪ್ರಧಾನ ಕಛೇರಿಯನ್ನು ಸ್ಥಾಪಿಸಲು ಯೋಚನೆಯನ್ನೇ ಮಾಡಿರಲಿಲ್ಲ. ಮೋದಿ ಕಾಲಘಟ್ಟದಲ್ಲಿ ಇದು ಸಾಧ್ಯವಾಗಿದ್ದು, ದೂರದೃಷ್ಟಿಯ ಅವರ ನಾಯಕತ್ವಕ್ಕೆ ಇದೊಂದು ನಿದರ್ಶನ ಎಂದು ಜೋಶಿ ಬಣ್ಣಿಸಿದರು.