ಮನೆ ರಾಷ್ಟ್ರೀಯ ಸಂವಿಧಾನವನ್ನು ರಕ್ಷಿಸಲು ಜನರು ತ್ಯಾಗ ಮಾಡಲು ಸಿದ್ಧರಾಗಿರಬೇಕು: ಮಲ್ಲಿಕಾರ್ಜುನ ಖರ್ಗೆ

ಸಂವಿಧಾನವನ್ನು ರಕ್ಷಿಸಲು ಜನರು ತ್ಯಾಗ ಮಾಡಲು ಸಿದ್ಧರಾಗಿರಬೇಕು: ಮಲ್ಲಿಕಾರ್ಜುನ ಖರ್ಗೆ

0

ನವದೆಹಲಿ: ನಮ್ಮ ಭಾತೃತ್ವವನ್ನು ನಾಶ ಮಾಡಲು ‘ಕೆಲವು ಶಕ್ತಿಗಳು’ ಯತ್ನಿಸುತ್ತಿದ್ದು, ಸಂವಿಧಾನವನ್ನು ರಕ್ಷಿಸಲು ಜನರು ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

Join Our Whatsapp Group

78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶದ ಜನತೆಗೆ ಶುಭಾಶಗಳನ್ನು ತಿಳಿಸಿರುವ ಖರ್ಗೆ, ‘ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರದ ‘ಗೊಂಬೆ’ಗಳಾಗಿ ಪರಿವರ್ತಿಸಿರುವುದು ನಿಜಕ್ಕೂ ಕಳವಳಕಾರಿ ವಿಷಯ’ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನವು 140 ಕೋಟಿ ಭಾರತೀಯರಿಗೆ ರಕ್ಷಾಕವಚವಾಗಿದ್ದು, ಕೊನೆಯ ಉಸಿರು ಇರುವವರೆಗೂ ಅದನ್ನು ಕಾಪಾಡುತ್ತೇವೆ ಎಂದು ಹೇಳಿದ್ದಾರೆ.  

ವಿಪಕ್ಷಗಳು ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ಇದ್ದಂತೆ, ಸರ್ಕಾರದ ಅಸಂವಿಧಾನಿಕ ಧೋರಣೆ ತಡೆಯುವುದರ ಜೊತೆಗೆ ಜನ ಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತದೆ ಎಂದು ಅವರು ಪ್ರತಿಪಾಧಿಸಿದ್ದಾರೆ.

ವಿವಿಧತೆಯಲ್ಲಿ ಏಕತೆಯನ್ನು ಕಾಪಾಡುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಆದರೆ ಕೆಲವು ಶಕ್ತಿಗಳು ತಮ್ಮ ನೀತಿಗಳನ್ನು ಬಲವಂತಾಗಿ ದೇಶದ ಮೇಲೆ ಹೇರುವ ಮೂಲಕ ನಮ್ಮ ಭಾತೃತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಅಭಿವ್ಯಕ್ತಿ, ಜೀವನ, ಆಹಾರ ಪದ್ಧತಿ, ಬಟ್ಟೆ, ಪೂಜಾ ವಿಧಾನ ಹಾಗೂ ಎಲ್ಲಿಗೆ ಬೇಕಾದರೂ ಹೋಗುವ ನಮ್ಮ ಸ್ವಾತಂತ್ರ್ಯದ ಬಗ್ಗೆ ಜಾಗೃತರಾಗಿರುವುದು ಅತಿ ಮುಖ್ಯ ಎಂದಿದ್ದಾರೆ.

ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಜನರಿಗೆ ಭರವಸೆ ನೀಡಲು  ಬಯಸುತ್ತೇನೆ. ಸಂವಿಧಾನದ ರಕ್ಷಣೆಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಇದುವೇ ನಮ್ಮ ಪೂರ್ವಜರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಲಕ್ಷಾಂತರ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುತ್ತೇವೆ. ಅವರಿಗೆ ನಮ್ಮ ನಮನಗಳು ಎಂದು ಹೇಳಿದ್ದಾರೆ.