ಮನೆ ಅಪರಾಧ ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ ಮಹಿಳೆ

ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ ಮಹಿಳೆ

0

ಗಂಗಾವತಿ(Gangavathi): ಕಲ್ಮಠದ ಪೀಠಾಧಿಕಾರಿ ಮತ್ತು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೊಟ್ಟೂರೇಶ್ವರ ಸ್ವಾಮೀಜಿ ಹಾಗೂ ಮತ್ತೋರ್ವ ವ್ಯಕ್ತಿ ಕೊಲೆ ಬೆದರಿಕೆ ಹಾಕಿ, ದೌರ್ಜನ್ಯ ಎಸಗಿದ್ದಾರೆ ಎಂದು ಪ್ರೌಢಶಾಲೆಯ ಅಡುಗೆ ಮಾಡುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಟ್ಟೂರೇಶ್ವರ ಸಂಯುಕ್ತ ಪದವಿ‌ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಹಿರೇಜಂತಕಲ್ ನಿವಾಸಿ ಕಮಲಾಕ್ಷಿ ಅಲಿಯಾಸ್ ನಿರ್ಮಲಾ ಮಲ್ಲಯ್ಯ ಸ್ವಾಮಿ ಎಂಬುವರು ಗಂಗಾವತಿ ನಗರ ಠಾಣೆಯಲ್ಲಿ ಬಸವಲಿಂಗಮ್ಮ ಹಾಗೂ ಕಲ್ಮಠದ ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ.

‘ನಾನು ಅಡುಗೆ ಕೆಲಸಕ್ಕೆ ಹೋದಾಗ ಬಸವಲಿಂಗಮ್ಮ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ. ಸ್ವಾಮೀಜಿ ಬಳಿ ಪಿಸ್ತೂಲ್ ಇದ್ದು, ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ. ಸ್ವಾಮೀಜಿ ಕೂಡ ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಟ್ಟೂರು ಸ್ವಾಮೀಜಿ, ‘ಮಹಿಳೆ ನೀಡಿರುವ ದೂರು ಸಂಪೂರ್ಣ ಸುಳ್ಳು. ಆಕೆಯ ಮೇಲೆ ಶಾಲೆಯಲ್ಲಿ ಸಾಕಷ್ಟು ದೂರುಗಳಿದ್ದವು. ತಿಳಿ ಹೇಳಿದರೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಹೀಗಾಗಿ, ಸಮಿತಿಯ ಸದಸ್ಯರಲ್ಲಿ ಚರ್ಚಿಸಿ ಕೆಲಸದಿಂದ ಬಿಡಿಸಲಾಗಿದೆ. ಇದರಿಂದ ಕೋಪಗೊಂಡು ದುರುದ್ದೇಶಪೂರ್ವಕವಾಗಿ ಮಹಿಳೆ ದೂರು ದಾಖಲಿಸಿದ್ದಾರೆ’ ಎಂದರು.