ಮನೆ ಅಪರಾಧ ಮಂಡ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವು, ಕೆರೆಗೆ ಹಾರಿ ಪ್ರಾಣಬಿಟ್ಟ ಪತಿ

ಮಂಡ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವು, ಕೆರೆಗೆ ಹಾರಿ ಪ್ರಾಣಬಿಟ್ಟ ಪತಿ

0

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ದಾರುಣ ಘಟನೆ ವರದಿಯಾಗಿದ್ದು, ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ್ದಾರೆ.

Join Our Whatsapp Group

ಸ್ವಾತಿ(21)ಅನುಮಾನಾಸ್ಪದವಾಗಿ ಮೃತಪಟ್ಟಿರುವ ಗೃಹಿಣಿ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಗಂಡನಿಂದಲೇ ಕೊಲೆ ಎಂದು ಮೃತ ಮಹಿಳೆ ಪೋಷಕರು ಆರೋಪ ಮಾಡಿದ್ದು ,ಈ ಘಟನೆಯ ಬಳಿಕ ಆಕೆಯ ಗಂಡ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಪತ್ನಿ ನೇಣು ಬಿಗಿದುಕೊಂಡು ಸಾವು ಕಂಡಿದ್ದರೆ, ಆಕೆಯ ಗಂಡ ಮೋಹನ್‌ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಪ್ರಸ್ತುತ ಇಬ್ಬರ ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದು, ಸಾವಿಗೆ ಕಾರಣಗಳು ಸಿಗಬಹುದು ಎನ್ನಲಾಗಿದೆ. ಆರಂಭದಲ್ಲಿ ಮಹಿಳೆಯ ಆತ್ಮಹತ್ಯೆ ವಿಚಾರ ಮಾತ್ರವೇ ತಿಳಿದ ಕಾರಣ, ಆತನ ಗಂಡ ಹಾಗೂ ಪೋಷಕರು ಪರಾರಿಯಾಗಿದ್ದಾರೆ ಎನ್ನಲಾಗಿತ್ತು.

ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ಮನೆಯ ಪೀಠೋಪಕರಣ ಧ್ವಂಸ ಮಾಡಿ‌ ಬಳಿಕ ಮನೆಗೆ ಬೆಂಕಿ‌‌ ಹಾಕಿ ದಾಂಧಲೆ ಎಬ್ಬಿಸಿದ್ದರು.

ಮೃತ ಗೃಹಿಣಿಯ ಪೋಷಕರು ಆಕೆಯ ಗಂಡ ಮತ್ತು ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದರು.

ಅಲ್ಲದೆ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಮೃತ ಸ್ವಾತಿ ಪೋಷಕರು ಆರೋಪ ಮಾಡಿದ್ದರು. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಪತ್ತೆಯಾಗಿರುವ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧ ಕಾರ್ಯ ನಡೆಸಿದ್ದರು. ಆದರೆ ಇಂದು ಬೆಳಿಗ್ಗೆ ಗಂಡ ಮೋಹನ್ ಶವ ಗದ್ದೆ ಹೊಸೂರು ಸಮೀಪದ ಕೆರೆಯಲ್ಲಿಯೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.

ದಂಪತಿಯ ಸಾವಿನಿಂದ ಒಂದುವರೆ ವರ್ಷದ ಹೆಣ್ಣು ಮಗು ಅನಾಥವಾಗಿದೆ ಎಂದು ತಿಳಿದು ಬಂದಿದೆ.