ಮನೆ ಕಾನೂನು ಮೆಟ್ರೋ ಕಾಮಗಾರಿಗೆ ಅಡ್ಡಿಯಾದ 41 ಮರಗಳ ಕಡಿಯಲು ಅನುಮತಿ ನೀಡಿದ ಹೈಕೋರ್ಟ್

ಮೆಟ್ರೋ ಕಾಮಗಾರಿಗೆ ಅಡ್ಡಿಯಾದ 41 ಮರಗಳ ಕಡಿಯಲು ಅನುಮತಿ ನೀಡಿದ ಹೈಕೋರ್ಟ್

0

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗಿರುವ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಕ್ಕೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ.

Join Our Whatsapp Group

ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿ ದತ್ತಾತ್ರೇಯ ಟಿ.ದೇವರೆ ಹಾಗೂ ಬೆಂಗಳೂರು ಎನ್ರಾ​ವಿರಾನ್‌ಮೆಂಟ್ ಟ್ರಸ್ಟ್ 2018 ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ.ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅನುಮತಿ ನೀಡಿದೆ.

ವಿಚಾರಣೆ ವೇಳೆ, ಬಿಎಂಆರ್‌ಸಿಎಲ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಆಗರದಿಂದ ಇಬ್ಬಲೂರು ಮಾರ್ಗದ ಎಚ್‌ಎಸ್‌ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗದಲ್ಲಿ ಬರುವ 20 ಮರಗಳನ್ನು ಸ್ಥಳಾಂತರಿಸಲು, 41 ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿ ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2024 ರ ಜುಲೈ 20 ರಂದು ಅಧಿಕೃತ ಜ್ಞಾಪನಾ ಹೊರಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಅಂತೆಯೇ ತೆರವುಗೊಳಿಸಲು ಅನುಮತಿಸಿರುವ 41 ಮರಗಳ ಪೈಕಿ 21 ಮರಗಳು ಯೋಜನಾ ಪ್ರದೇಶದಲ್ಲಿ ಬರಲಿವೆ. ಇನ್ನುಳಿದ 20 ಮರಗಳು ಹೊರವರ್ತುಲ ರಸ್ತೆಯ ಎಡ ಮತ್ತು ಬಲಬದಿ ಬರಲಿವೆ. ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಅಧಿಕೃತ ಜ್ಞಾಪನಾ (ಅಫಿಷಿಯಲ್ ಮೆಮೊರಾಂಡಮ್) ಆಧರಿಸಿ ಮುಂದುವರಿಯಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಬೇಕು ಎಂದು ಕೋರಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು, ಇದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ, ಹೈಕೋರ್ಟ್ ಈವರೆಗೆ ನೀಡಿರುವ ಆದೇಶಗಳನ್ನು ಮತ್ತು ತಜ್ಞರ ಸಮಿತಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬುದು ನಮ್ಮ ಕಾಳಜಿಯಾಗಿದೆ. ಸ್ಥಳಾಂತರಗೊಳಿಸಿದ ಮರಗಳನ್ನು ಎಲ್ಲಿ ಸ್ಥಳಾಂತರಿಸಲಾಗಿದೆ. ಅವುಗಳ ವಸ್ತುಸ್ಥಿತಿ ಮತ್ತು ಬಾಳಿಕೆ ಹಾಗೂ ತೆರವುಗೊಳಿಸಿದ ಮರಗಳಿಗೆ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್ ಹೇಳಿದೆ. ಇದರ ಬಗ್ಗೆ ಪ್ರತಿ ಮೂರು ತಿಂಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಆದರೆ, ಕಳೆದ ಒಂದು ವರ್ಷದಿಂದ ಅಂತಹ ವರದಿ ಸಲ್ಲಿಸಲಾಗಿಲ್ಲ. ಇದನ್ನು ನ್ಯಾಯಾಲಯ ಗಮನಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಹೈಕೋರ್ಟ್ ಆದೇಶಗಳನ್ನು, ತಜ್ಞರ ಸಮಿತಿ ಶಿಫಾರಸ್ಸು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅರ್ಜಿದಾರರ ಪರ ವಕೀಲರು ಪ್ರತಿ ಮೂರು ತಿಂಗಳಿಗೆ ವರದಿ ಸಲ್ಲಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಆ ವರದಿಯನ್ನೂ ಸಲ್ಲಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಸಂರಕ್ಷಣಾಧಿಕಾರಿ 20 ಮರಗಳನ್ನು ಸ್ಥಳಾಂತರಿಸಲು ಮತ್ತು 41 ಮರಗಳನ್ನು ತೆರವುಗೊಳಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿತು. ಇದೇ ವೇಳೆ ಮರ ಅಧಿಕಾರಿ, ತಜ್ಞರ ಸಮಿತಿ ವಿಧಿಸಿರುವ ಷರತ್ತುಗಳು ಮತ್ತು ಕಾಲ ಕಾಲಕ್ಕೆ ಹೈಕೋರ್ಟ್ ಹೊರಡಿಸಿರುವ ಆದೇಶ, ನಿರ್ದೇಶನಗಳನ್ನು ಬಿಎಂಆರ್‌ಸಿಎಲ್ ಪಾಲಿಸುವುದರ ಮೇಲೆ ಈ ಅನುಮತಿ ಅವಲಂಬಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.