ಮನೆ ಅಪರಾಧ ಕೋಣನಕುಂಟೆ ಠಾಣೆ ಇನ್ಸ್ಪೆಕ್ಟರ್ ಹಲ್ಲೆಯಿಂದ ವ್ಯಕ್ತಿ ಸಾವು ಆರೋಪ; ತನಿಖೆಗೆ ತಂಡ ರಚನೆ

ಕೋಣನಕುಂಟೆ ಠಾಣೆ ಇನ್ಸ್ಪೆಕ್ಟರ್ ಹಲ್ಲೆಯಿಂದ ವ್ಯಕ್ತಿ ಸಾವು ಆರೋಪ; ತನಿಖೆಗೆ ತಂಡ ರಚನೆ

0

ಬೆಂಗಳೂರು: ಪೊಲೀಸರ ಹಲ್ಲೆಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ  ಗಂಭೀರ ಆರೋಪ ಕೇಳಿ ಬಂದಿದೆ. ಜಮೀನು ವ್ಯಾಜ್ಯ ಸಂಬಂಧ ರಾಮಸ್ವಾಮಿ ಎಂಬ ವ್ಯಕ್ತಿಯನ್ನು ಕೋಣನಕುಂಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪಾಪಣ್ಣ ಹಲ್ಲೆ ನಡೆಸಿದ್ದರು. ಇದೀಗ ವ್ಯಕ್ತಿ ಮೃತಪಟ್ಟಿದ್ದು,  ಮೃತ ರಾಮಸ್ವಾಮಿ ಪತ್ನಿ ಮುನಿಯಮ್ಮ ಅವರು ಕೇಸ್ ದಾಖಲಿಸಿದ್ದಾರೆ.

Join Our Whatsapp Group

ಕೊತ್ತನೂರಿನಲ್ಲಿ ರಾಮಸ್ವಾಮಿ‌ ಮತ್ತು ನಿರ್ಮಿತ ಕೇಂದ್ರದ ನಡುವೆ ಜಮೀನು ವ್ಯಾಜ್ಯ ಇದೆ. 2 ತಿಂಗಳ ಹಿಂದೆ ಈ‌ ಜಮೀನಿನಲ್ಲಿ ನೀಲಗಿರಿ ಮರ ತೆರವು ಮಾಡಲು ನಿರ್ಮಿತಿ‌ ಕೇಂದ್ರದ ಸಿಬ್ಬಂದಿ ಹೋಗಿದ್ದರು. ಕೋಣನಕುಂಟೆ ಪೊಲೀಸರ ಭದ್ರತೆ ಜೊತೆಗೆ ಮರ ತೆರವು ಮಾಡಲು ಹೋಗಿದ್ದರು. ಈ ವೇಳೆ ಜಮೀನು‌ ನಮ್ಮದು ಎಂದು ರಾಮಸ್ವಾಮಿ ಕುಟುಂಬ ಅಡ್ಡಿಪಡಿಸಿತ್ತು. ಆದರೆ ಇದೇ ಜಗಳ‌ದ ಮಧ್ಯೆ ಪೊಲೀಸರು ರಾಮಸ್ವಾಮಿ‌, ಆಕೆ ಪತ್ನಿ, ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ಸ್ಪೆಕ್ಟರ್ ಪಾಪಣ್ಣ ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದು ಬಳಿಕ ರಾಮಸ್ವಾಮಿ ಮತ್ತು ಮಗಳನ್ನ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಬಿಪಿ, ಶುಗರ್ ಇದ್ದ ರಾಮಸ್ವಾಮಿ ಹಲ್ಲೆಯಿಂದ ನಿತ್ರಾಣರಾಗಿದ್ದರು. ಪೊಲೀಸರೇ ರಾಮಸ್ವಾಮಿಯನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ರು. ನಂತರ ರಾಮಸ್ವಾಮಿ ಅವರ ಪತ್ನಿ ಹಾಗೂ ಮಗಳ ಬಳಿ ಬಂದು ಪೊಲೀಸರು ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ಹಲ್ಲೆ ವಿಚಾರ ಹೇಳಿದರೆ ಮಗಳನ್ನ ಶಾಶ್ವತವಾಗಿ ಜೈಲಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಇಷ್ಟೆಲ್ಲದರ ನಂತರ ನ್ಯಾಯಾಧೀಶರ ಮುಂದೆ ನಿಂತಾಗ ರಾಮಸ್ವಾಮಿ ಕುಸಿದು ಬಿದ್ದಿದ್ದರು. ನಂತರ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಂತರ ಮನೆಗೆ ಮರಳಿದ್ದ ರಾಮಸ್ವಾಮಿ ಅವರು 3 ದಿನದ ಹಿಂದೆ ಮೃತಪಟ್ಟಿದ್ದಾರೆ. ಆದ್ರೆ ಪತಿ ಮೃತರಾಗಿದ್ದು ಪೊಲೀಸರ ಹಲ್ಲೆಯಿಂದ ಎಂದು ಪತ್ನಿ ಆರೋಪ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ, ಪೊಲೀಸ್ ಆಯುಕ್ತರಿಗೆ ರಾಮಸ್ವಾಮಿ ಪತ್ನಿ ಮುನಿಯಮ್ಮ ದೂರು ನೀಡಿದ್ದಾರೆ. ಪತಿ ಸಾವಿಗೆ ಕೋಣನಕುಂಟೆ ಇನ್ಸ್ಪೆಕ್ಟರ್ ಪಾಪಣ್ಣನೇ ಕಾರಣ ಎಂದು ಆರೋಪ ಮಾಡಿದ್ದಾರೆ. ಸದ್ಯ ಕುಟುಂಬಸ್ಥರ ಆರೋಪ ಸಂಬಂಧ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ನಿನ್ನೆಯಷ್ಟೇ ಮೃತದೇಹ ಮರಣೋತ್ತರ ಪರೀಕ್ಷೆ ತನಿಖಾಧಿಕಾರಿ ಸಮ್ಮುಖದಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ನಿರ್ಮಿತ ಕೇಂದ್ರದ ಸಿಬ್ಬಂದಿ‌ ನೀಡಿದ ದೂರಿನಡಿ ರಾಮಸ್ವಾಮಿ‌ ಕುಟುಂಬದ ಮೇಲೂ ಕೇಸ್ ದಾಖಲಾಗಿತ್ತು. ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದ ಆರೋಪದಡಿ ಕೋಣನಕುಂಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.