ಮನೆ ರಾಜಕೀಯ ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು: ಡಾ. ಶರಣ್ ಪ್ರಕಾಶ್ ಪಾಟೀಲ್

ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು: ಡಾ. ಶರಣ್ ಪ್ರಕಾಶ್ ಪಾಟೀಲ್

0

ಬೆಂಗಳೂರು ಸೆ. 21: ಯಾವುದೇ ಶಿಕ್ಷಣ ಸಂಸ್ಥೆಯ ಮೂಲಾಧಾರಗಳೆಂದರೆ ಶಿಕ್ಷಕರು. ಅವರು ಯುವ ಮನಸ್ಸುಗಳನ್ನು ರೂಪಿಸುವುದು, ಆಲೋಚಿಸಲು, ಸಂಸ್ಕಾರ, ಸಂಸ್ಕೃತಿ, ಮಾನವೀಯತೆಯ ಪಾಠವನ್ನು ಹೇಳಿಕೊಟ್ಟು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ರೂವಾರಿಗಳಾಗಿರುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಭಾಷಣ ಮಾಡಿದರು.

ಶಿಕ್ಷಣ ತಜ್ಞರು ಈ ದೇಶದಲ್ಲಿ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಅಂಥ ಕೆಲವು ಉತ್ತಮ ಮತ್ತು ಅತ್ಯುತ್ತಮ ಶಿಕ್ಷಕರು ನಮ್ಮ ಸಂಸ್ಥೆಯಲ್ಲಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.

ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಹಿನ್ನೆಲೆಯಲ್ಲಿ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಾದರದಿಂದ ಸನ್ಮಾನ ಮಾಡುವುದು ಪುಣ್ಯದ ಕೆಲಸ. ಇಂಥ ಶಿಕ್ಷಕರು ನಮಗೆಲ್ಲ ಪ್ರಾತಃಸ್ಮರಣೀಯರು. ಅವರು ಹಾಕಿಕೊಟ್ಟ ಅಡಿಪಾಯದಿಂದ ನಾವು ಈಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ ಎಂದು ಸಚಿವರು ತಮ್ಮ ಗುರುಗಳನ್ನೂ ಸ್ಮರಿಸಿದರು.

ವೈದ್ಯಕೀಯ ಶಿಕ್ಷಣದಲ್ಲಿ ಶಿಕ್ಷಕರನ್ನು ಗುರುತಿಸುವುದು ಮತ್ತು ಪ್ರಶಸ್ತಿ ನೀಡುವುದು ಅತ್ಯಗತ್ಯ. ಶ್ರೇಷ್ಠತೆ ಮತ್ತು ಆರೋಗ್ಯ ವ್ಯವಸ್ಥೆಯ ನಿರಂತರ ಬೆಳವಣಿಗೆಯನ್ನು ಖಾತ್ರಿಪಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ವೈದ್ಯಕೀಯ ಶಿಕ್ಷಣ, ಇತರ ಹಲವು ಕ್ಷೇತ್ರಗಳಿಗಿಂತ ಭಿನ್ನವಾಗಿದೆ ಹೆಚ್ಚು ಬದ್ಧತೆಯ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಗರಿಷ್ಠ ಬದ್ಧತೆ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಶಿಕ್ಷ ಣತಜ್ಞರು, ಅವರು ಜ್ಞಾನ ದಾನ ಮಾಡುವುದಲ್ಲದೇ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಕ್ಲಿನಿಕಲ್ ಕೌಶಲ್ಯಗಳು, ನೈತಿಕ ಮೌಲ್ಯಗಳು ಮತ್ತು ಸಹಾನುಭೂತಿಯ ಆರೈಕೆ ಬಗ್ಗೆ ಮನದಟ್ಟು ಮಾಡುತ್ತಾರೆ. ಅಂಥವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಅವರ ಕೊಡುಗೆಗಳನ್ನು ಸ್ಮರಿಸೋಣ ಎಂದು ಪಾಟೀಲ್ ಹೇಳಿದರು.

ವಿವಿಯ ಅಂಗಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಇದೀಗ 10,000 ಕ್ಕಿಂತ ಹೆಚ್ಚು ಶಿಕ್ಷಕರು ತರಬೇತಿ ಪಡೆದಿದ್ದಾರೆ. ಇನ್ನೂ 30,000ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸಮಾರಂಭದದಲ್ಲಿ ಡಾ. ಕೆ.ವಿ. ಅಶೋಕ್ ಕುಮಾರ್, ಡಾ. ಎ.ಆರ್. ರಘುಪತಿ, ಡಾ. ಸದಾಶಿವ ಶೆಟ್ಟಿ, ಡಾ. ಆಶಾಲತಾ, ಡಾ. ಎಸ್.ಕೆ. ತಿವಾರಿ ಅವರಿಗೆ “ಪ್ರೊಫೆಸರ್ ಎಮೆರಿಟಸ್” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ವಿ. ರಾಜಗೋಪಾಲ್, ಡಾ. ದುರ್ಗಣ್ಣ ಟಿ., ಡಾ. ದಿನೇಶ್ ರಾಮು, ಡಾ. ಶೋಭಾರಾಣಿ ಆರ್. ಹಿರೇಮಠ, ಡಾ. ಉಮೇಶ್ ವಿ. ಪುರದ್, ಡಾ. ಸುಚೇತಾ ಕಾಂತ, ಡಾ. ಕೆ. ರೆಡ್ಡೆಮ್ಮ, ಡಾ. ಎನ್.ಎಸ್. ಪ್ರಕಾಶ್ ಅವರಿಗೆ “ಆರೋಗ್ಯ ವಿಜ್ಞಾನಗಳ ಶ್ರೇಷ್ಠ ಶಿಕ್ಷಕ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ಕುಲಸಚಿವರುಗಳಾದ ಶಿವಪ್ರಸಾದ್ ಪಿ ಆರ್, ಡಾ. ರಿಯಾಜ್ ಬಾಷಾ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.