ಲಕ್ನೋ : ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು ಕಟುಕ ತಂದೆಯೊಬ್ಬ ತನ್ನ 13 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ 40 ವರ್ಷದ ಆರೋಪಿ ತಂದೆ ಅಜಯ್ ಶರ್ಮಾನನ್ನ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಸೋನಮ್ (13) ಮೃತಪಟ್ಟ ಮಗಳು. ಇವರು ಬಿಚೌಲಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ನೆನ್ನೆ (ಶುಕ್ರವಾರ) ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದ್ದಾಗಿ ಬುಲಂದ್ಶಹರ್ ಪೊಲೀಸರಿಗೆ ಮಾಹಿತಿ ಬಂದಿತು. ಅನುಪ್ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೇತುವೆ ಕೆಳಗಿನ ಪೊದೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ತಂದೆಯೇ ಆರೋಪಿ ಅನ್ನೋದು ಗೊತ್ತಾಗಿದೆ. ವಿಚಾರಣೆ ವೇಳೆ ಆರೋಪಿ ಕೂಡ ತಪ್ಪೊಪ್ಪಿಕೊಂಡಿದ್ದಾನೆ.
ಮೃತ ಸೋಮನ್ ಗುರುವಾರ ಎಂದಿನಂತೆ ಶಾಲೆಗೆ ಹೋಗಿದ್ದಳು. ಪ್ರತಿದಿನ ಶಾಲೆ ಮುಗಿದ ಬಳಿಕ ಆಕೆಯ ನಾನೇ ಮನೆಗೆ ಕರೆದುಕೊಂಡು ಹೋಗ್ತಿದ್ದೆ. ಆದರೆ ಗುರುವಾರ ಆಕೆಯನ್ನು ಮನೆಗೆ ಕರೆದೊಯ್ಯುವ ಬದಲು ತನ್ನ ಹೊಲಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲೇ ಮಗಳಿಗೆ ಸ್ಕಾಫ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದೇನೆ. ಈ ಬಳಿಕ ಶವವನ್ನು ಹತ್ತಿರದ ಕಾಲುವೆಗೆ ಎಸೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಆರೋಪಿ ತನ್ನ ಮಗಳು ಮನೆಯಿಂದ ಹಣ ಕದಿಯುತ್ತಿದ್ದಳು. ಇದರಿಂದ ಗಂಡ – ಹೆಂಡ್ತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಹಾಗಾಗಿ ನಾನೇ ಮಗಳನ್ನ ಕೊಂದೆ. ಕೊಂದ ಬಳಿಕ ಮಗಳು ಸಂಬಂಧಿಕರ ಮನೆಗೆ ಹೋಗಿದ್ದಾಳೆ, 3-4 ದಿನ ಅಲ್ಲೇ ಇರುತ್ತಾಳೆಂದು ಹೆಂಡತಿಗೆ ಹೇಳಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.














